ನಿರೀಕ್ಷೆಯಂತೆ ಸಿಎಂ ಶಿಂಧೆ ಪರ ಸ್ಪೀಕರ್ ತೀರ್ಪು
ಮುಂಬೈ, ಜ. 10: ‘ಶಿವಸೇನೆ v/s ಶಿವಸೇನೆ’ ಪ್ರಕರಣದ ತೀರ್ಪನ್ನು ಪ್ರಕಟಿಸಿದ ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್, ‘ಶಿವಸೇನೆಯ ಸಂವಿಧಾನದ ಪ್ರಕಾರ, ಏಕನಾಥ್ ಶಿಂಧೆಯನ್ನು ಶಾಸಕಾಂಗ ಪಕ್ಷದ ನಾಯಕನ ಸ್ಥಾನದಿಂದ ತೆಗೆದುಹಾಕಲು ಉದ್ಧವ್ ಠಾಕ್ರೆ ಅವರಿಗೆ ಯಾವುದೇ ಅಧಿಕಾರವಿಲ್ಲ’ ಎಂದು ಹೇಳಿದ್ದಾರೆ.
‘ಪಕ್ಷದ ನಾಯಕತ್ವ ರಚನೆಯನ್ನು ಗುರುತಿಸಲು ಪಕ್ಷದ ಸಂವಿಧಾನವು ಪ್ರಸ್ತುತವಾಗಿದೆ’ ಎಂದು ಹೇಳಿದರು. ಆ ಮೂಲಕ, ಶಿಂಧೆ ನೇತೃತ್ವದ ಬಣವನ್ನು ನಿಜವಾದ ಶಿವಸೇನೆ ಎಂದು ಸ್ಪೀಕರ್ ಘೋಷಿಸಿದ್ದಾರೆ. ‘ಉದ್ಧವ್ ಠಾಕ್ರೆ ಬಣವು ಪ್ರಸ್ತುತಪಡಿಸಿದ ವಾದಗಳಲ್ಲಿ ಹುರುಳಿಲ್ಲ. ಯಾವುದೇ ನಾಯಕನನ್ನು ಪಕ್ಷದಿಂದ ತೆಗೆದುಹಾಕುವ ಅಧಿಕಾರ ಶಿವಸೇನೆ ‘ಪ್ರಮುಖ’ಗೆ ಇಲ್ಲ’ ಎಂದು ನಾರ್ವೇಕರ್ ಅವರು ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ.
‘2018ರ ಪಕ್ಷದ ಸಂವಿಧಾನವನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ. ಚುನಾವಣಾ ಆಯೋಗವು ಹೊರಡಿಸಿದ ಶಿವಸೇನೆ ಸಂವಿಧಾನವು ಅಧಿಕೃತ ದಾಖಲೆಯಾಗಿದೆ. ಇನ್ನು ಮುಂದೆ ಇದನ್ನು ಪಕ್ಷದ ಸಂವಿಧಾನ ಎಂದು ಉಲ್ಲೇಖಿಸಲಾಗುತ್ತದೆ’ ಎಂದು ಹೇಳಿದ್ದಾರೆ.
‘ಇಂದಿನ ತೀರ್ಪಿಗೂ ಮೊದಲು ಸ್ಪೀಕರ್ ಅವರು ಸಿಎಂ ಏಕನಾಥ್ ಶಿಂಧೆ ಅವರನ್ನು ಭೇಟಿ ಮಾಡಿದ್ದಾರೆ. ಇದು ಮ್ಯಾಚ್ ಫಿಕ್ಸಿಂಗ್’ ಎಂದು ಹೇಳಿರುವ ಉದ್ಧವ್ ಬಣ, ಈಗಾಗಲೇ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ‘ಮೊದಲನೆಯಯಾದಾಗಿ, ತೀರ್ಪಿಗೆ ಮುನ್ನ ಸ್ಪೀಕರ್ ಮುಖ್ಯಮಂತ್ರಿಯನ್ನು ಭೇಟಿಯಾಗಿರುವುದನ್ನು ನಾವು ನೋಡಿದ್ದೇವೆ. ನಂತರ, ನ್ಯಾಯ ನೀಡಬೇಕಾದವರು ಆರೋಪಿಗಳ ಬಳಿಗೆ ಹೋದರು ಎಂಬ ಭಾವನೆಯನ್ನು ಮೂಡಿಸಲು ಪ್ರಯತ್ನಿಸುತ್ತಿದೆ. ಇದು ಇತಿಹಾಸದಲ್ಲಿ ಎಂದಿಗೂ ಸಂಭವಿಸಿಲ್ಲ’ ಎಂದು ಮಾಜಿ ಸಚಿವ ಮತ್ತು ಶಾಸಕ ಆದಿತ್ಯ ಠಾಕ್ರೆ ಹೇಳಿದ್ದಾರೆ.
2022ರಲ್ಲಿ ಏಕನಾಥ್ ಶಿಂಧೆ ಅವರು ಸುಮಾರು 50 ಶಾಸಕರ ಬೆಂಬಲದೊಂದಿಗೆ ಅಂದಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯ ಸಾರಿದಾಗ ಅಧಿಕಾರದ ಹೋರಾಟ ಪ್ರಾರಂಭವಾಯಿತು. ಜೂನ್ 2022: ಶಿಂಧೆ ಅವರು ಬಂಡಾಯವನ್ನು ಘೋಷಿಸಿದರು. ತಮ್ಮ ಬೆಂಬಲಿಗರೊಂದಿಗೆ ಅಸ್ಸಾಂಗೆ ಹೋಗಿ, ನಂತರ ಬಿಜೆಪಿಯ ಸಹಾಯದಿಂದ ಸರ್ಕಾರಕ್ಕೆ ಹಕ್ಕು ಸಾಧಿಸಿದರು. ಜೂನ್ 29, 2022ರಂದು ಮಹಾರಾಷ್ಟ್ರ ರಾಜ್ಯಪಾಲರು ತಮ್ಮ ಬಹುಮತವನ್ನು ಸಾಬೀತುಪಡಿಸಲು ಉದ್ಧವ್ ಅವರನ್ನು ಕೇಳಿದ ನಂತರ, ಸುಪ್ರೀಂ ಕೋರ್ಟ್ ಅಸೆಂಬ್ಲಿಯಲ್ಲಿ ವಿಶ್ವಾಸಮತ ಪರೀಕ್ಷೆಗೆ ಅನುಮತಿ ನೀಡಿತು. ನಂತರ ಉದ್ಧವ್ ಠಾಕ್ರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಬಿಜೆಪಿ ಬೆಂಬಲದೊಂದಿಗೆ ಜೂನ್ 30, 2022ರಂದು ಏಕನಾಥ್ ಶಿಂಧೆ ಮುಖ್ಯಮಂತ್ರಿಯಾದರು. ಜುಲೈ 4, 2022ರಂದು ಏಕನಾಥ್ ಶಿಂಧೆ ಅವರು ವಿಧಾನಸಭೆಯಲ್ಲಿ ವಿಶ್ವಾಸಮತ ಪರೀಕ್ಷೆಯನ್ನು ಗೆದ್ದರು. ಅಕ್ಟೋಬರ್ 2022ರಂದು ಚುನಾವಣಾ ಆಯೋಗವು ಶಿವಸೇನೆಯ ಬಿಲ್ಲು ಮತ್ತು ಬಾಣದ ಚಿಹ್ನೆಯನ್ನು ಸ್ಥಗಿತಗೊಳಿಸಿತು. 2023 ಫೆಬ್ರವರಿಯಲ್ಲಿ ಚುನಾವಣಾ ಆಯೋಗವು ಶಿಂಧೆ ಬಣಕ್ಕೆ ಬಿಲ್ಲು ಮತ್ತು ಬಾಣದ ಚಿಹ್ನೆಯನ್ನು ನೀಡಿತು.
2023ರ ಮೇನಲ್ಲಿ ಐವರು ನ್ಯಾಯಾಧೀಶರ ಸಂವಿಧಾನ ಪೀಠವು ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರವನ್ನು ಅನರ್ಹಗೊಳಿಸಲು ಮತ್ತು ಉದ್ಧವ್ ಠಾಕ್ರೆ ಅವರನ್ನು ಮುಖ್ಯಮಂತ್ರಿಯಾಗಿ ಮರುಸ್ಥಾಪಿಸಲು ಸಾಧ್ಯವಿಲ್ಲ ಎಂದು ಹೇಳಿತು. ಏಕೆಂದರೆ, ಉದ್ಧವ್ ವಿಶ್ವಾಸಮತ ಯಾಚಿಸುವ ಮೊದಲು ರಾಜೀನಾಮೆನೀಡಿದ್ದಾರೆ ಎಂದು ಹೇಳಿತು. 2023, ಡಿಸೆಂಬರ್ 15ರಂದು ಶಿಂಧೆ ಸೇರಿದಂತೆ ಶಾಸಕರ ವಿರುದ್ಧದ ಅನರ್ಹತೆ ಅರ್ಜಿಗಳ ತೀರ್ಪು ಪ್ರಕಟಿಸಲು ಸ್ಪೀಕರ್ಗೆ ಸುಪ್ರೀಂ ಕೋರ್ಟ್ ಜನವರಿ 10 ರವರೆಗೆ ಸಮಯವನ್ನು ವಿಸ್ತರಿಸಿತು.