ನಿರ್ಮಲಾ ಸೀತಾರಾಮನ್ ಅವರ 28 ಪುಟಗಳ ಭಾಷಣ ಸುಳ್ಳುಗಳ ಸರಮಾಲೆಯಿಂದ ಕೂಡಿದೆ’: ಸಿದ್ದರಾಮಯ್ಯ ಟೀಕೆ

ನಿರ್ಮಲಾ ಸೀತಾರಾಮನ್ ಅವರ 28 ಪುಟಗಳ ಭಾಷಣ ಸುಳ್ಳುಗಳ ಸರಮಾಲೆಯಿಂದ ಕೂಡಿದೆ’: ಸಿದ್ದರಾಮಯ್ಯ ಟೀಕೆ

ಬೆಂಗಳೂರು, ಫೆಬ್ರವರಿ 01: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ ಒಂದರಂದು 2024-25ನೇ ಸಾಲಿನ ಹಣಕಾಸು ವರ್ಷದ ಮಧ್ಯಂತರ ಬಜೆಟ್ ಅನ್ನು ಮಂಡಿಸಿದ್ದಾರೆ. ಬಜೆಟ್‌ಗೆ ಬಿಜೆಪಿ ನಾಯಕರು ಸಂತೋಷ ವ್ಯಕ್ತಪಡಿಸಿದ್ದರೇ, ಕಾಂಗ್ರೆಸ್ ಸೇರಿ ಅನೇಕ ಪ್ರತಿಪಕ್ಷಗಳು ಇದು ನೀರಸ ಬಜೆಟ್ ಎಂದು ಟೀಕಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ “ಇದು ವಿಕಸಿತ ಭಾರತ ಅಲ್ಲ ವಿನಾಶಕಾರಿ ಭಾರತದ ಬಜೆಟ್” ಎಂದಿದ್ದಾರೆ. “ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಡಿಸಿದ 2024-25ರ ಮಧ್ಯಂತರ ಆಯವ್ಯಯ ಪತ್ರದಲ್ಲಿ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಸನ್ಮಾನ್ಯ ನರೇಂದ್ರ ಮೋದಿಯವರು ನಿರ್ಮಿಸಿರುವ ‘ವಿನಾಶಕಾರಿ ಭಾರತ’ ದ ವಾಸ್ತವವನ್ನು ಬಚ್ಚಿಟ್ಟು ‘ವಿಕಸಿತ ಭಾರತ’ ಎಂಬ ಭ್ರಮಾಲೋಕವನ್ನು ದೇಶದ ಜನತೆಗೆ ಮಾರಾಟ ಮಾಡಲು ಪ್ರಯತ್ನಿಸಿದ್ದಾರೆ” ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಬಡವರು, ಮಹಿಳೆಯರು, ಯುವಕರು ಮತ್ತು ರೈತರನ್ನೊಳಗೊಂಡ ನಾಲ್ಕು ‘ಜಾತಿ’ ಗಳ ಅಭಿವೃದ್ದಿಯ ಮೇಲೆ ಪ್ರಧಾನಿ ನರೇಂದ್ರ ಮೋದಿಯವರು ನಂಬಿಕೆ ಇಟ್ಟಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ. ಇದನ್ನೆ ‘ವಿಕಸಿತ ಭಾರತ’ ಕನಸು ಎಂದು ಅವರು ಹೇಳಿಕೊಂಡಿದ್ದಾರೆ. ನರೇಂದ್ರ ಮೋದಿಯರ ಹತ್ತು ವರ್ಷಗಳ ಆಡಳಿತದಲ್ಲಿ ಕಷ್ಟ,ನಷ್ಟ, ದಮನ, ದೌರ್ಜನ್ಯಕ್ಕೀಡಾಗಿರುವುದು ಇದೇ ಬಡವರು, ಮಹಿಳೆಯರು, ಯುವಕರು ಮತ್ತು ರೈತರು. ಈ ಸಮುದಾಯಗಳ ಪಾಲಿಗೆ ಮೋದಿಯವರ ಹತ್ತು ವರ್ಷಗಳ ಆಡಳಿತ ‘ವಿಕಸಿತ ಭಾರತ’ ಅಲ್ಲ ಅದು ‘ವಿನಾಶಕಾರಿ ಭಾರತ” ಎಂದು ಟೀಕಿದ್ದಾರೆ.

“ಮುಖ್ಯಮಂತ್ರಿಯಾಗಿ ಮಂಡಿಸಿರುವ ಏಳು ಆಯವ್ಯಯ ಪತ್ರಗಳಲ್ಲಿ ನಾನು ಬಡವರು, ಮಹಿಳೆಯರು, ಯುವಕರು ಮತ್ತು ರೈತರನ್ನೇ ಕೇಂದ್ರವಾಗಿಟ್ಟುಕೊಂಡು ಅಭಿವೃದ್ದಿ ಯೋಜನೆಗಳನ್ನು ರೂಪಿಸಿದ್ದೆ. ಬಹಳ ಮುಖ್ಯವಾಗಿ ನಮ್ಮ ಹೊಸ ಸರ್ಕಾರ ಅನುಷ್ಠಾನಗೊಳಿಸಿರುವ ಗ್ಯಾರಂಟಿ ಯೋಜನೆಗಳು ಕೂಡಾ ಈ ಬಡವರು, ಮಹಿಳೆಯರು, ಯುವಕರು ಮತ್ತು ರೈತರ ಕಲ್ಯಾಣವನ್ನೇ ದೃಷ್ಟಿಯಲ್ಲಿಟ್ಟುಕೊಂಡು ರೂಪಿಸಿರುವಂತಹದ್ದು. ಬಡವರಿಗಾಗಿ ಅನ್ನಭಾಗ್ಯ, ಮಹಿಳೆಯರಿಗಾಗಿ ಗೃಹಲಕ್ಷ್ಮಿ, ಯುವಕರಿಗಾಗಿ ಯುವನಿಧಿ ಮತ್ತು ರೈತರಿಗಾಗಿ ಕೃಷಿ ಭಾಗ್ಯ ಮತ್ತು ಸಾಲಮನ್ನಾದಂತಹ ಯೋಜನೆಗಳನ್ನು ನಮ್ಮ ಸರ್ಕಾರ ಕರ್ನಾಟಕದಲ್ಲಿ ಯಶಸ್ವಿಯಾಗಿ ಜಾರಿಗೆ ತಂದಿದೆ” ಎಂದಿದ್ದಾರೆ.

“ದೇಶ-ವಿದೇಶದ ಆರ್ಥಿಕ ತಜ್ಞರು ಶ್ಲಾಘಿಸಿರುವ ನಮ್ಮ ಈ ಅಭಿವೃದ್ದಿಯ “ಕರ್ನಾಟಕ ಮಾದರಿ” ಯನ್ನು ದೇಶದ ಬೇರೆ ಬೇರೆ ರಾಜ್ಯಗಳು ಕೂಡಾ ಅನುಷ್ಠಾನಕ್ಕೆ ತರುತ್ತಿವೆ. ನಮ್ಮ ಗ್ಯಾರಂಟಿ ಯೋಜನೆಗಳನ್ನು ಬಿಟ್ಟಿ ಯೋಜನೆಗಳೆಂದು ಹೀಗಳೆಯುತ್ತಿದ್ದ ನರೇಂದ್ರ ಮೋದಿಯವರು ಈಗ ನಮ್ಮ ಗ್ಯಾರಂಟಿ ಯೋಜನೆಗಳನ್ನೇ ನಕಲು ಮಾಡಿ ತಮ್ಮದು ಗ್ಯಾರಂಟಿ ಸರ್ಕಾರ ಎಂದು ಹೇಳುತ್ತಿರುವುದನ್ನು ಕೂಡಾ ರಾಜ್ಯದ ಜನತೆ ಗಮನಿಸಿದ್ದಾರೆ. ನಿರ್ಮಲಾ ಸೀತಾರಾಮನ್ ಅವರು ತಮ್ಮ ಸರ್ಕಾರದ ಹತ್ತು ವರ್ಷಗಳ ಸಾಧನೆಯನ್ನು ವಿವರವಾಗಿ ತಿಳಿಸಬಹುದು ಎಂದು ನಾನು ನಿರೀಕ್ಷಿಸಿದ್ದೆ. ಆದರೆ, ನಿರ್ಮಲಾ ಸೀತಾರಾಮನ್ ಅವರು ಬಿಚ್ಚಿಟ್ಟದ್ದಕ್ಕಿಂತ ಹೆಚ್ಚು ಬಚ್ಚಿಟ್ಟಿರುವುದೇ ಹೆಚ್ಚು” ಎಂದು ವ್ಯಂಗ್ಯವಾಡಿದ್ದಾರೆ. ” ನಿರ್ಮಲಾ ಸೀತಾರಾಮನ್ ಅವರ 28 ಪುಟಗಳ ಭಾಷಣ ಸುಳ್ಳುಗಳ ಸರಮಾಲೆಯಿಂದ ಕೂಡಿದೆ. ಸಾಮಾನ್ಯ ಜನರ ಆದಾಯ ಶೇಕಡಾ 50ರಷ್ಟು ಹೆಚ್ಚಾಗಿದೆ ಎಂದು ಹಣಕಾಸು ಸಚಿವೆ ಹೇಳಿದ್ದಾರೆ. ವಾಸ್ತವದ ಸಂಗತಿ ಎಂದರೆ ನಿರುದ್ಯೋಗದ ಪ್ರಮಾಣ ಹೆಚ್ಚಾಗಿದೆ. ಕೇಂದ್ರ ಸರ್ಕಾರವು 25 ಕೋಟಿ ಮಂದಿಯನ್ನು ಬಡತನದ ತೆಕ್ಕೆಯಿಂದ ಹೊರತಂದಿರುವುದಾಗಿ ಹೇಳುತ್ತಿದೆ. ಜನತೆಯನ್ನು ಬಡತನದಿಂದ ಹೊರತರುವ ಯಾವುದೇ ನಿರ್ದಿಷ್ಟ ಯೋಜನೆಗಳನ್ನು ಕೇಂದ್ರ ಹೊಂದಿಲ್ಲ” ಂದು ಸಿದ್ದರಾಮಯ್ಯ ಹೇಳಿದ್ದಾರೆ.

ಕೇಂದ್ರ ಸರ್ಕಾರ ಹೇಳುತ್ತಿರುವ ‘ನೇರ ನಗದು ಹಣ ವರ್ಗಾವಣೆ’ಯಂತಹ ಕ್ರಮಗಳ ಲಾಭವನ್ನು ಪಡೆದಿರುವವರ ಸಂಖ್ಯೆ ಅತ್ಯಂತ ವಿರಳವಾಗಿದೆ. ಎಲ್‌ಪಿಜಿ ಸಬ್ಸಿಡಿ ಇಂದು ಬಹುತೇಕರಿಗೆ ದೊರೆಯುತ್ತಿಲ್ಲ. ಉಜ್ವಲಾ ಯೋಜನೆಯಡಿ ಗ್ಯಾಸ್‌ ಕನೆಕ್ಷನ್‌ ಪಡೆದವರು ಸಿಲಿಂಡರ್‌ ಪಡೆಯಲು ಹಣ ಹೊಂದಿಸಲಾಗದೆ ಅನಿಲ ಸ್ಟವ್‌ಗಳ ಬಳಕೆ ನಿಲ್ಲಿಸಿದ್ದಾರೆ. ಎಂದಿದ್ದಾರೆ. ರೈತರಿಗೆ ತಮ್ಮ ಬೆಳೆಗೆಳಿಗೆ ದೊರೆಯಬೇಕಾದ ಕನಿಷ್ಠ ಬೆಂಬಲ ಬೆಲೆಯನ್ನು ಸಾಧ್ಯವಾಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಯಾವುದೇ ಪ್ರಯತ್ನ ಮಾಡಿಲ್ಲ. ಬಜೆಟ್‌ನಲ್ಲಿ ರೈತರ ಬೇಡಿಕೆಗಳಿಗೆ ಸೂಕ್ತ ಸ್ಪಂದನೆ ಇಲ್ಲ. ಬಜೆಟ್ ನ 47 ಲಕ್ಷ ಕೋಟಿ ರೂ.ಗಳಲ್ಲಿ 16,85494 ಕೋಟಿ ರೂ ಸಾಲ ಮಾಡಿದ್ದಾರೆ. ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಬರಬೇಕಾದ ಅನುದಾನ ಬಂದಿಲ್ಲ. 15ನೇ ಹಣಕಾಸು, ಫೆರಿಫೆರಲ್ ರಿಂಗ್ ರೋಡಿಗೆ ಹಣ ಬಂದಿಲ್ಲ. ₹5,300 ಕೋಟಿ ಭದ್ರ ಮೇಲ್ದಂಡೆ ಯೋಜನೆಗೆ ಬಂದಿಲ್ಲ. ಬರಗಾಲದ ಪರಿಹಾರಕ್ಕೂ ಒಂದು ಪೈಸೆ ಬಂದಿಲ್ಲ ಎಂದು ಕಿಡಿಕಾರಿದ್ದಾರೆ. “ನಮ್ಮಿಂದ 4 ಲಕ್ಷ ಕೋಟಿ ತೆರಿಗೆ ವಸೂಲಿ ಮಾಡುವ ಕೇಂದ್ರ ಸರ್ಕಾರ ನಮಗೆ, ನಮ್ಮ ನಾಡಿಗೆ ನಿರಂತರವಾಗಿ ಅನ್ಯಾಯ ಮಾಡುತ್ತಿದೆ ಅಖಂಡ ಭಾರತ, ಅಖಂಡ ಕರ್ನಾಟಕ ಉಳಿಯಬೇಕು. ಇದಕ್ಕಾಗಿ ರಾಜ್ಯಗಳ ಪಾಲನ್ನು ಚಾಚೂ ತಪ್ಪದೆ ಕೊಡಬೇಕು. ಬಿಜೆಪಿ ಆಳ್ವಿಕೆಯ ಈ “ವಿನಾಶಕಾರಿ ಭಾರತ”ದಲ್ಲಿ ದೇಶದ ಎಲ್ಲ ಜಾತಿ-ಧರ್ಮಗಳ ಬಡವರು, ರೈತರು, ಕಾರ್ಮಿಕರು, ಮಹಿಳೆಯರು ಹಾಗೂ ವಿಶೇಷವಾಗಿ ದಲಿತ ಹಿಂದುಳಿದ ಜಾತಿಗಳು ಮತ್ತು ಅಲ್ಪಸಂಖ್ಯಾತ ಸಮುದಾಯಗಳು ದಮನಕ್ಕೀಡಾಗಿದ್ದಾರೆ. ಈ ದೃಷ್ಟಿಯಲ್ಲಿ ನಾವಿಂದು ಪ್ರಜಾಪ್ರಭುತ್ವದ “ಅಮೃತ ಕಾಲ”ದಲ್ಲಿ ಇಲ್ಲ, “ಮೃತ ಕಾಲ”ದಲ್ಲಿದ್ದೇವೆ” ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Previous Post
ಪೂಜೆಗೆ ಅವಕಾಶ ಪ್ರಶ್ನಿಸಿ ಕೋರ್ಟ್‌ ಮೆಟ್ಟಿಲೇರಿದ ಜ್ಞಾನವಾಪಿ ಮಸೀದಿ ಸಮಿತಿ
Next Post
Vande bharat ಮಾದರಿ 40 ಸಾವಿರ ಬೋಗಿ ಅಭಿವೃದ್ಧಿ

Recent News