ಪೂಜೆಗೆ ಅವಕಾಶ ಪ್ರಶ್ನಿಸಿ ಕೋರ್ಟ್‌ ಮೆಟ್ಟಿಲೇರಿದ ಜ್ಞಾನವಾಪಿ ಮಸೀದಿ ಸಮಿತಿ

ಪೂಜೆಗೆ ಅವಕಾಶ ಪ್ರಶ್ನಿಸಿ ಕೋರ್ಟ್‌ ಮೆಟ್ಟಿಲೇರಿದ ಜ್ಞಾನವಾಪಿ ಮಸೀದಿ ಸಮಿತಿ

ಅಲಹಾಬಾದ್, ಫೆ. 1: ಜ್ಞಾನವಾಪಿ ಮಸೀದಿಯ ದಕ್ಷಿಣ ನೆಲಮಾಳಿಗೆಯಲ್ಲಿ ಹಿಂದೂಗಳಿಗೆ ಪೂಜೆ ಮಾಡಲು ಅವಕಾಶ ನೀಡಿರುವ ವಾರಣಾಸಿ ಜಿಲ್ಲಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮಸೀದಿ ನಿರ್ವಹಣಾ ಸಮಿತಿ ಅಂಜುಮನ್ ಇಂತೇಝಾಮಿಯಾ ಮಸಾಜಿದ್ ಅಲಹಾಬಾದ್ ಹೈಕೋರ್ಟ್‌ನ ಮೆಟ್ಟಿಲೇರಿದೆ.

ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನೋಜ್ ಕುಮಾರ್ ಗುಪ್ತಾ ಅವರ ಮುಂದೆ ಹಿರಿಯ ವಕೀಲ ಎಸ್‌ಎಫ್‌ಎ ನಖ್ವಿ ವಿಷಯ ಪ್ರಸ್ತಾಪಿಸಿದ್ದಾರೆ. ಈ ವೇಳೆ ವಿಷಯವನ್ನು ತುರ್ತು ಪಟ್ಟಿಯಲ್ಲಿ ಸೇರಿಸಲು ರಿಜಿಸ್ಟ್ರಾರ್‌ ಬಳಿಗೆ ಹೋಗುವಂತೆ ನ್ಯಾಯಮೂರ್ತಿ ಸೂಚಿಸಿದ್ದಾರೆ. ಅದರಂತೆ, ವಕೀಲ ನಖ್ವಿ ಪ್ರಕರಣವನ್ನು ತುರ್ತು ಪಟ್ಟಿ ಮಾಡುವಂತೆ ರಿಜಿಸ್ಟ್ರಾರ್‌ಗೆ ಮನವಿ ಮಾಡಿದ್ದಾರೆ. ಸದ್ಯದಲ್ಲೇ ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆ ಇದೆ.

ಮಸೀದಿಯ ದಕ್ಷಿಣ ನೆಲಮಾಳಿಗೆಯಲ್ಲಿರುವ ವ್ಯಾಸ್ ಜಿ ಕಾ ತೆಹ್ಖಾನಾದಲ್ಲಿ ಹಿಂದೂಗಳಿಗೆ ಪೂಜೆಗೆ ಅವಕಾಶ ನೀಡಿ ವಾರಣಾಸಿ ಜಿಲ್ಲಾ ನ್ಯಾಯಾಲಯ ಜನವರಿ 31ರಂದು ಆದೇಶ ನೀಡಿತ್ತು. ಇದರ ವಿರುದ್ದ ಮಸೀದಿ ಸಮಿತಿ ಸುಪ್ರೀಂ ಕೋರ್ಟ್‌ ಕೊರೆ ಹೋಗಿತ್ತು. ಮನವಿಯನ್ನು ತುರ್ತಾಗಿ ಆಲಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿ ಹಿನ್ನೆಲೆ ಮಸೀದಿ ಸಮಿತಿ ಹೈಕೋರ್ಟ್‌ ಮೊರೆ ಹೋಗಿದೆ. ಈ ನಡುವೆ ಪೊಲೀಸ್‌ ಬಿಗಿ ಭದ್ರತೆಯೊಂದಿಗೆ ಜ್ಞಾನವಾಪಿ ಮಸೀದಿಯ ನೆಲ ಮಾಳಿಗೆಯಲ್ಲಿ ಪೂಜೆ ಪ್ರಾರಂಭಗೊಂಡಿದೆ.

ಜ್ಞಾನವಾಪಿ ಮಸೀದಿ ಸಂಕೀರ್ಣದೊಳಗೆ ಮುಚ್ಚಿದ ನೆಲಮಾಳಿಗೆ ತೆಹ್ಖಾನಾ (ವ್ಯಾಸ್ ಜಿ ಕಾ ತೆಹ್ಖಾನಾ) ದೊಳಗೆ ಹಿಂದೂಗಳು ಪೂಜಾ ವಿಧಿಗಳನ್ನು ನಡೆಸಲು 7 ದಿನಗಳಲ್ಲಿ ಸೂಕ್ತ ವ್ಯವಸ್ಥೆ ಮಾಡುವಂತೆ ವಾರಣಾಸಿ ಜಿಲ್ಲಾ ನ್ಯಾಯಾಧೀಶರು ನಿನ್ನೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದ್ದರು. ಈ ಪ್ರಕರಣವು ಜ್ಞಾನವಾಪಿ ಮಸೀದಿ ಆವರಣದಲ್ಲಿರುವ ‘ಸೋಮನಾಥ ವ್ಯಾಸ್’ ತೆಹ್ಖಾನಾಗೆ ಸಂಬಂಧಿಸಿದೆ. 1993 ರವರೆಗೆ, ವ್ಯಾಸ ಕುಟುಂಬವು ನೆಲಮಾಳಿಗೆಯಲ್ಲಿ ಧಾರ್ಮಿಕ ಆಚರಣೆಗಳನ್ನು ನಡೆಸುತ್ತಿತ್ತು. ಆದರೆ, ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ಅದನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳಲಾಗ್ತಿದೆ.

ವಾರಣಾಸಿ ಜಿಲ್ಲಾ ನ್ಯಾಯಾಧೀಶರ ಆದೇಶದ ನಂತರ ಜಿಲ್ಲಾ ಮ್ಯಾಜಿಸ್ಟ್ರೇಟ್ ಎಂ.ಎಸ್ ರಾಜಲಿಂಗಂ ಅವರು ಇತರ ಸರ್ಕಾರಿ ಅಧಿಕಾರಿಗಳೊಂದಿಗೆ ಕಾಶಿ ಕಾರಿಡಾರ್‌ನ ಗೇಟ್ ಸಂಖ್ಯೆ 4ರ ಮೂಲಕ ಮಸೀದಿ ಸಂಕೀರ್ಣವನ್ನು ಪ್ರವೇಶಿಸಿದ್ದಾರೆ. ಅಧಿಕಾರಿಗಳು ಮಸೀದಿ ಸಂಕೀರ್ಣದೊಳಗೆ ಸುಮಾರು ಎರಡು ಗಂಟೆಗಳ ಕಾಲ ಇದ್ದರು. ಹೊರ ಬರುವಾಗ ನ್ಯಾಯಾಲಯದ ಆದೇಶವನ್ನು ಪಾಲಿಸಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಹೊರಗೆ ಹಾಜರಿದ್ದ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಏಳು ದಿನಗಳಲ್ಲಿ ಹಿಂದೂಗಳಿಗೆ ಪೂಜೆಗೆ ವ್ಯವಸ್ಥೆ ಮಾಡುವಂತೆ ವಾರಣಾಸಿ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ. ಆದರೆ, ಜಿಲ್ಲಾಡಳಿತ ತರಾತುರಿಯಲ್ಲಿ ಪೂಜೆಗೆ ವ್ಯವಸ್ಥೆ ಮಾಡಿದೆ. ಮಧ್ಯರಾತ್ರಿ ನಡೆದ ಈ ಬೆಳವಣಿಗೆ ಮಸೀದಿ ಸಮಿತಿ ವಾರಣಾಸಿ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸುವ ಕಾನೂನಾತ್ಮ ಅವಕಾಶವನ್ನು ತಡೆಯುವ ಉದ್ದೇಶ ಹೊಂದಿದೆ ಎಂದು ಹೈಕೋರ್ಟ್‌ಗೆ ಸಲ್ಲಿಸಿದ ಆರ್ಜಿಯಲ್ಲಿ ಮಸೀದಿ ಸಮಿತಿ ಹೇಳಿದೆ.

Previous Post
ಚಂಡೀಗಢ ಮೇಯರ್ ಚುನಾವಣೆ: ಸುಪ್ರೀಂ ಕದ ತಟ್ಟಿದ ಎಎಪಿ
Next Post
ನಿರ್ಮಲಾ ಸೀತಾರಾಮನ್ ಅವರ 28 ಪುಟಗಳ ಭಾಷಣ ಸುಳ್ಳುಗಳ ಸರಮಾಲೆಯಿಂದ ಕೂಡಿದೆ’: ಸಿದ್ದರಾಮಯ್ಯ ಟೀಕೆ

Recent News