ಬಿಜೆಪಿಗೆ ದಕ್ಷಿಣ ಭಾರತ ತಂದ ಸಂಕಷ್ಟ
ಕೇಂದ್ರ ಸರ್ಕಾರದಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗಿದೆ ಎಂಬ ಕೂಗು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಮೊದಲಿಗೆ ಅನುದಾನ ತಾರತಮ್ಯದ ವಿರುದ್ದ ಕರ್ನಾಟಕ ದೆಹಲಿಯ ಜಂತರ್ ಮಂತರ್ನಲ್ಲಿ ಬೃಹತ್ ಪ್ರತಿಭಟನೆ ನಡೆಸಿತು. ದೇಶದ ಇತಿಹಾಸದಲ್ಲೇ ರಾಜ್ಯದ ಮುಖ್ಯಮಂತ್ರಿಯೊಬ್ಬರು ತನ್ನ ಇಡೀ ಸಚಿವ ಸಂಪುಟದ ಜೊತೆಗೆ ದೆಹಲಿಗೆ ಹೋಗಿ ಪ್ರತಿಭಟನೆ ಮಾಡಿದ್ದು ಇದೇ ಮೊದಲು. ಇದಾದ ಮೇಲೆ ಕೇರಳ ಸರ್ಕಾರ ಅದೇ ಜಾಗದಲ್ಲಿ ಪ್ರತಿಭಟನೆ ನಡೆಸಿದೆ. ಕೇರಳದ ವಾದ ಕೂಡ ಕೇಂದ್ರ ಸರ್ಕಾರ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಿದೆ ಎಂದೇ. ಕೇರಳದ ಪ್ರತಿಭಟನೆಗೆ ತಮಿಳುನಾಡು ಬೆಂಬಲ ನೀಡಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರವಿರುವುದರಿಂದ ಕರ್ನಾಟಕದ ನಿಲುವನ್ನೇ ಹೊಂದಿದೆ. ಇದೀಗ ದಕ್ಷಿಣದ ಮತ್ತೊಂದು ರಾಜ್ಯ ಆಂಧ್ರ ಪ್ರದೇಶ ಕೂಡ ಕೇಂದ್ರದ ವಿರುದ್ದ ಸಮರ ಸಾರುವ ಲಕ್ಷಣ ಕಾಣುತ್ತಿದೆ. ಎನ್ಡಿಎ ಬಣದ ಜೊತೆ ಗುರುತಿಸಿಕೊಂಡಿದ್ದ ಜಗನ್ ಮೋಹನ್ ರೆಡ್ಡಿ ಕೇಂದ್ರದ ತಾರತಮ್ಯದ ವಿರುದ್ದ ಧ್ವನಿಯೆತ್ತಿರುವುದು ವಿಶೇಷವೆನಿಸಿದೆ. ಒಟ್ಟಿನಲ್ಲಿ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಹೊಸ ರೀತಿಯ ಸಂಕಷ್ಟ ಶುರುವಾದಂತೆ ಕಾಣಿಸುತ್ತಿದೆ.