ಭಗವಂತ್ ಮಾನ್ ಕೊಲ್ಲುವುದಾಗಿ ಪನ್ನು ಬೆದರಿಕೆ
ಅಮೃತಸರ, ಜ. 16: ಗಣರಾಜ್ಯೋತ್ಸವದಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ಅವರನ್ನು ಕೊಲ್ಲುವುದಾಗಿ ಖಲಿಸ್ತಾನಿ ಪರ ಗುಂಪಿನ ಗುರುಪತ್ವಂತ್ ಸಿಂಗ್ ಪನ್ನುನ್ ಬೆದರಿಕೆ ಹಾಕಿದ್ದಾನೆ ಎಂದು ಹೇಳಲಾಗಿದೆ. ಪಂಜಾಬ್ನ ಗ್ಯಾಂಗ್ಸ್ಟರ್ಗಳನ್ನ ಒಗ್ಗೂಡಿಸಿ ಸಿಎಂ ಭಗವಂತ್ ಮಾನ್ ಅವರನ್ನು ಕೊಲ್ಲುವುದಾಗಿ ಪನ್ನುನ್ ಹೇಳಿರುವುದಾಗಿ ವರದಿ ತಿಳಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಪಂಜಾಬ್ ಡಿಜಿಪಿ ಗೌರವ್ ಯಾದವ್, ರಾಜ್ಯ ಪೊಲೀಸ್ ಇಲಾಖೆ ಗ್ಯಾಂಗ್ಸ್ಟರ್ಗಳ ವಿರುದ್ಧ ನಿರ್ಧಾಕ್ಷಣ್ಯ ಕ್ರಮ ಕೈಗೊಳ್ಳಲಾಗುವುದು. ಯಾವುದೇ ದುರ್ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗುವುದು ಎಂದು ತಿಳಿಸಿದ್ದಾಗಿ ವರದಿ ಹೇಳಿದೆ. ಖಲಿಸ್ತಾನ್ ಪ್ರತ್ಯೇಖತವಾದಿ ಪರ ಸಿಖ್ ಫಾರ್ ಜಸ್ಟಿಸ್ (ಎಸ್ಎಫ್ಜೆ) ಸಂಸ್ಥಾಪಕ ಮತ್ತು ಭಾರತ ಸರ್ಕಾರ ಭಯೋತ್ಪಾದಕ ಎಂದು ಗುರುತಿಸಿರುವ ಪನ್ನುನ್, ಈ ಹಿಂದೆ ಭಾರತೀಯ ಸಂಸ್ಥೆಗಳು ಮತ್ತು ಅಧಿಕಾರಿಗಳ ವಿರುದ್ಧ ಅನೇಕ ಬೆದರಿಕೆಗಳನ್ನು ಹಾಕಿದ್ದ.
ಕಳೆದ ಡಿಸೆಂಬರ್ ತಿಂಗಳ 13ರಂದು ಸಂಸತ್ ಭವನದ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದ. ಅಂದೇ ಸಂಸತ್ ಭವನದ ಒಳಗೆ ಮತ್ತು ಹೊರಗೆ ನಾಲ್ವರು ಯುವಜನರು ಪ್ರತಿಭಟನೆ ನಡೆಸಿ ಬಂಧಿತರಾಗಿದ್ದರು. ಇದಕ್ಕೂ ಮುನ್ನ ನವೆಂಬರ್ 19ರಂದು ಏರ್ ಇಂಡಿಯಾ ವಿಮಾನಯಾನ ಸಂಸ್ಥೆಗೆ ಪನ್ನುನ್ ಬೆದರಿಕೆ ಹಾಕಿದ್ದ. ಈ ಸಂಬಂಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಪನ್ನುನ್ ವಿರುದ್ಧ ಪ್ರಕರಣ ದಾಖಲಿಸಿದೆ.