ಮನಮೋಹನ್ ಸಿಂಗ್ ಆಡಳಿತ ವಿವರಿಸಿ ಬಿಜೆಪಿಗೆ ಚಾಲೆಂಜ್ ಮಾಡಿದ ಜಿ.ಪರಮೇಶ್ವರ್

ಮನಮೋಹನ್ ಸಿಂಗ್ ಆಡಳಿತ ವಿವರಿಸಿ ಬಿಜೆಪಿಗೆ ಚಾಲೆಂಜ್ ಮಾಡಿದ ಜಿ.ಪರಮೇಶ್ವರ್

ಬೆಂಗಳೂರು, ಫೆಬ್ರವರಿ 05: ಕರ್ನಾಟಕದಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷ ವಿಚಾರವಾಗಿ ಆರೋಪ ಪ್ರತ್ಯಾರೋಪಗಳು ಮುಂದುವರೆದಿವೆ. ಇದೀಗ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಆಡಳಿತ ವೈಖರಿಯನ್ನು ಕರ್ನಾಟಕ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಪ್ರಸ್ತಾಪಿಸಿ ಬಿಜೆಪಿಗೆ ಸವಾಲು ಹಾಕಿದ್ದಾರೆ. ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಡಾ.‌ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಅನುದಾನ ನೀಡುವ ವಿಚಾರದಲ್ಲಿ ರಾಜ್ಯಕ್ಕೆ ಯಾವುದೇ ರೀತಿಯ ಅನ್ಯಾಯವಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಮನಮೋಹನ್ ಸಿಂಗ್ ಅವರು ಆರ್ಥಿಕ ತಜ್ಞರಾಗಿ‌ ಬ್ಯಾಲೆನ್ಸ್ ಮಾಡುತ್ತಿದ್ದರು. ಈ ಹಿಂದೆ ಪ್ರವಾಹ ಉಂಟಾದಾಗ ವೈಮಾನಿಕ ಸಮೀಕ್ಷೆ ನಡೆಸಿ ಎರಡು ಸಾವಿರ ಕೋಟಿ ರೂ. ಮಂಜೂರು ಮಾಡಿದ್ದರು. ಅವರ ಅವಧಿಯಲ್ಲಿ ಅನ್ಯಾಯವಾಗಿತ್ತು ಎನ್ನುವುದಾದರೆ ಬಿಜೆಪಿಯವರು ಸಾಭೀತುಪಡಿಸಲಿ ಎಂದು ಸವಾಲೆಸೆದರು.

ಅನುದಾನ ನೀಡದ ವಿಚಾರ ರಾಜಕೀಯ ಮಾಡಿಲ್ಲ ಜಿಎಸ್‌ಟಿ ಜಾರಿಯಾದ ನಂತರ ತೆರಿಗೆ ಸಂಗ್ರಹದಲ್ಲಿ ಕರ್ನಾಟಕ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ನಮ್ಮ‌ ರಾಜ್ಯಕ್ಕೆ ಬರಬೇಕಾದ ಜಿಎಸ್‌ಟಿ ಪಾಲು ಸಂಪೂರ್ಣವಾಗಿ ಸಿಕ್ಕಿಲ್ಲ. ಬರ ಪರಿಹಾರಕ್ಕೆ 17 ಸಾವಿರ ಕೋಟಿ ರೂ. ಕೇಳಿದರು ಈವರೆಗೂ ಕೊಟ್ಟಿಲ್ಲ. ಎನ್‌ಡಿಆರ್‌ಎಫ್ ಫಂಡ್ ಸಹ ಬಂದಿಲ್ಲ. ಆದರೂ ನಾವು ಇದನ್ನೆಲ್ಲ‌ ರಾಜಕೀಯ ಮಾಡೋದಿಕ್ಕೆ ಹೋಗಿಲ್ಲ. ರಾಜ್ಯಕ್ಕೆ ಆಗಿರುವ ಅನ್ಯಾಯದ ಕುರಿತು ನಾವು ದೆಹಲಿಗೆ ಹೋಗಿ ಪ್ರತಿಭಟನೆ‌ ನಡೆಸುತ್ತೇವೆ.‌ ದೇಶದ ಜನತೆಗೆ ಗೊತ್ತಾಗಲಿ ಎಂದರು. ಕೇಂದ್ರ ಸರ್ಕಾರ ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯ ಜನರಿಗೆ ಗೊತ್ತಾಗಿದೆ. ವಿಶೇಷ ಅನುದಾನವನ್ನು ನಾವು ಕೇಳಿಲ್ಲ. ಆದರೆ, ನಮಗೆ ಬರಬೇಕಾದ ಪಾಲು‌ ಕೊಟ್ಟರೆ ಸಾಕು. ಯುಪಿಎ ಮತ್ತು ಎನ್‌ಡಿಎ ಅವಧಿಯ ಅನುದಾನ ಬಗ್ಗೆ ಕೇಂದ್ರ ಸರರ್ಕಾರ ಶ್ವೇತಪತ್ರ ಹೊರಡಿಸಲಿ. ರಾಜ್ಯದ್ದು ನಾವು ಹೊರಡಿಸುತ್ತೇವೆ ಎಂದು ಹೇಳಿದರು.

ರಾಜಸ್ವ ಸಂಗ್ರಹ ಕಡಿಮೆಯಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಆರೋಪ ಮಾಡುತ್ತಿದೆ ಎಂಬ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ದೇಶದಲ್ಲಿ ಕರ್ನಾಟಕ ಎರಡನೇ ದೊಡ್ಡ ಟ್ಯಾಕ್ಸ್ ಪೇಯರ್ ಅಲ್ಲ ಎಂಬುದನ್ನು ಅವರು ಹೇಳಲಿ. ನಂತರ ರಾಜಸ್ವ ಸಂಗ್ರಹದ‌ ಬಗ್ಗೆ ಚರ್ಚಿಸೋಣ.‌ ನಮಗೆ ಬರಗಾಲ ಇದೆ. ನಮ್ಮ ಹಕ್ಕು ಅದನ್ನ ಕೇಳುತ್ತಿದ್ದೇವೆ ಅಷ್ಟೇ ಎಂದು ಅವರು ತಿರುಗೇಟು ಕೊಟ್ಟರು. ವಿಪಕ್ಷ ಕಾರ್ಯಕರ್ತರ ಮೇಲೆ ಹಲ್ಲೆ ಆಗಿಲ್ಲ ಪ್ರತಿಭಟನೆ ಮಾಡುವುದಾದರೆ ಸ್ವಾತಂತ್ರ್ಯ ಉದ್ಯಾನದಲ್ಲಿ ಶಾಂತಿಯುತವಾಗಿ ಮಾಡಬೇಕು. ಮನೆಗೆ ಯಾರಾದರೂ ನುಗ್ಗುತ್ತಾರೆ ಅಂದಾಗ ಪೊಲೀಸರು ಸುಮ್ಮನೆ ಇರುವುದಿಲ್ಲ. ರಾಜ್ಯದಲ್ಲಿ ಶಾಂತಿ‌-ಸುವ್ಯವಸ್ಥೆ ಕಾಪಾಡಬೇಕು.‌‌ ಆ‌ ಕೆಲಸವನ್ನು‌ ಪೊಲೀಸರು ಮಾಡಿದ್ದಾರೆ. ಡಿ.ಕೆ.ಸುರೇಶ್ ಅವರ ಮನೆಗೆ ಮುತ್ತಿಗೆ ಹಾಕುತ್ತೇವೆ ಅಂತ ಬಂದಾಗ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ. ಪೊಲೀಸರಿಂದ ಯಾರ ಮೇಲೂ ಹಲ್ಲೆಯಾಗಿಲ್ಲ ಎಂದು ಗೃಹ ಸಚಿವರು ಸ್ಪಷ್ಟಪಡಿಸಿದರು. ರಾಜ್ಯದ ದುಡ್ಡನ್ನು ಗ್ಯಾರಂಟಿಗೆ ದಾನ‌ ಮಾಡಿರುವುದರಿಂದ ಹಣವಿಲ್ಲ. ಹೀಗಾಗಿ‌ ಪ್ರತಿಭಟನೆ ಮಾಡುತ್ತಿದ್ದಾರೆ ಎಂದ ಮುನಿರತ್ನ ಹೇಳಿಕೆಗೆ, ಮುನಿರತ್ನ ಯಾವಾಗ ಎಕನಾಮಿಸ್ಟ್ ಆದರೋ ಗೊತ್ತಿಲ್ಲ. ನಾವ್ಯಾರೂ ಎಕಾನಾಮಿಸ್ಟ್ ಅಲ್ಲ.‌ ಮುನಿರತ್ನ ಹೇಳಿದ್ದಾರೆ ಎಂದ‌ ಮೇಲೆ ಕೇಳೋಣ ಎಂದರು.

Previous Post
ಶಬರಿಯಂತೆ ಕಾದರೂ ಪ್ರಯೋಜನವಿಲ್ಲ: ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಕುರಿತು ಅಂಕಿ ಅಂಶಗಳನ್ನ ಬಿಚ್ಚಿಟ್ಟ ಸಿದ್ದರಾಮಯ್ಯ
Next Post
ಲೋಕಸಭಾ ಚುನಾವಣೆ: ಕಾಂಗ್ರೆಸ್‌ ನಿಂದ 16 ಅಭ್ಯರ್ಥಿಗಳ ಶಾರ್ಟ್‌ ಲಿಸ್ಟ್‌ ರೆಡಿ?

Recent News