ರಾಯಚೂರಿಗೆ ಏಮ್ಸ್ ಮಂಜೂರು ಮಾಡುವಂತೆ ಕೇಂದ್ರ ಆರೋಗ್ಯ ಸಚಿವರಿಗೆ ಮನವಿ

ರಾಯಚೂರಿಗೆ ಏಮ್ಸ್ ಮಂಜೂರು ಮಾಡುವಂತೆ ಕೇಂದ್ರ ಆರೋಗ್ಯ ಸಚಿವರಿಗೆ ಮನವಿ

ರಾಯಚೂರಿಗೆ ಏಮ್ಸ್ ಮಂಜೂರು ಮಾಡುವಂತೆ ಕೇಂದ್ರ ಆರೋಗ್ಯ ಸಚಿವರಿಗೆ ಮನವಿ
• ದೆಹಲಿಯಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರ ಭೇಟಿ
• ಸಣ್ಣ ನೀರಾವರಿ ಸಚಿವರಾದ ಎನ್ ಎಸ್ ಭೋಸರಾಜು, ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ಭೇಟಿ

ದೆಹಲಿ ಫೆಬ್ರವರಿ 07: ಸಣ್ಣ ನೀರಾವರಿ ಸಚಿವರಾದ ಎನ್ ಎಸ್ ಭೋಸರಾಜು ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣ್‌ ಪ್ರಕಾಶ್ ಪಾಟೀಲ್ ಅವರು ಇಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಡಾ. ಮನಸುಕ್ ಮಾಂಡವಿಯಾ ಅವರನ್ನ ಭೇಟಿಯಾಗಿ ರಾಯಚೂರು ನಗರಕ್ಕೆ ಏಮ್ಸ್ (AIIMS) ಮಂಜೂರು ಮಾಡುವಂತೆ ಎರಡನೇ ಬಾರಿ ಮನವಿ ಸಲ್ಲಿಸಿದರು.

ಭೇಟಿಯ ನಂತರ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್ ಎಸ್ ಭೋಸರಾಜು ಅವರು ಮಾತನಾಡಿ, ರಾಯಚೂರು ಜಿಲ್ಲೆ ರಾಜ್ಯದ ಹಿಂದುಳಿದ ಜಿಲ್ಲೆಗಳಲ್ಲಿ ಒಂದು. ಈ ಜಿಲ್ಲೆಯ ಸರ್ವತೋಮುಖ ಅಭಿವೃದ್ದಿಗಾಗಿ ಪ್ರತಿಷ್ಠಿತ ಶೈಕ್ಷಣಿಕ ಹಾಗೂ ವೈದ್ಯಕೀಯ ಸೌಲಭ್ಯ ಒದಗಿಸುವ ಸಂಸ್ಥೆ ಸ್ಥಾಪನೆ ಆಗಬೇಕು ಎನ್ನುವುದು ರಾಯಚೂರು ಜಿಲ್ಲೆಯ ನಾಗರೀಕರು ಬಹುದಿನಗಳ ಬೇಡಿಕೆಯಾಗಿದೆ. ರಾಯಚೂರು ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ಒಂದಾಗಿದ್ದು, ಭಾರತೀಯ ಸಂವಿಧಾನದ 371(ಜೆ) ವಿಧಿಯಲ್ಲಿನ ವಿಶೇಷ ನಿಬಂಧನೆಯ ಅಡಿಯಲ್ಲಿ ಒಳಗೊಳ್ಳುತ್ತದೆ, ಆರೋಗ್ಯ, ಶಿಕ್ಷಣ ಮತ್ತು ತಲಾ ಆದಾಯದ ಮಟ್ಟಗಳು ಕರ್ನಾಟಕದ ಇತರ ಪ್ರದೇಶಗಳಿಗೆ ಹೋಲಿಸಿದರೆ ಇನ್ನೂ ಕೆಳಮಟ್ಟದಲ್ಲಿರುತ್ತವೆ. ನಂಜುಂಡಪ್ಪ ವರದಿಯ ಅನ್ವಯ ರಾಯಚೂರು ನಗರಕ್ಕೆ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಯನ್ನು ಸ್ಥಾಪಿಸುವಂತೆ ಶಿಫಾರಸ್ಸು ಮಾಡಲಾಗಿತ್ತು. ರಾಯಚೂರು ನಗರದಲ್ಲೇ ಏಮ್ಸ್(AIIMS) ಸ್ಥಾಪಿಸುವಂತೆ ರಾಜ್ಯಸರಕಾರವೂ ತನ್ನ ಒಪ್ಪಿಗೆಯನ್ನು ನೀಡಿದೆ. ಆದರೆ, ಕರ್ನಾಟಕಕ್ಕೆ ಏಮ್ಸ್(AIIMS) ಮಂಜೂರು ಮಾಡುವ ಭರವಸೆ ನೀಡಿದ್ದ ಕೇಂದ್ರ ಸರಕಾರ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈಗಾಗಲೇ ನನ್ನ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಎರಡನೇ ಬಾರಿ ಆರೋಗ್ಯ ಸಚಿವರಿಗೆ ಮನವಿ ಸಲ್ಲಿಸಿದ್ದೇವೆ ಎಂದು ವಿವರಿಸಿದ್ದೇವೆ. ಅಲ್ಲದೇ, ಮುಖ್ಯಮಂತ್ರಿಗಳ ಕೇಂದ್ರ ಸರಕಾರಕ್ಕೆ ಬರೆದಿರುವ ಮೂರು ಪತ್ರಗಳನ್ನೂ ನೀಡಿದ್ದೇವೆ. ಕೇಂದ್ರ ಆರೋಗ್ಯ ಮಂತ್ರಿಗಳು ಈ ಬಗ್ಗೆ ಶೀಘ್ರದಲ್ಲಿ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದ್ದಾರೆ ಎಂದರು.

ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣ್ ಪ್ರಕಾಶ್ ಪಾಟೀಲ್ ಮಾತನಾಡಿ, ರಾಯಚೂರು ನಗರದಲ್ಲಿ ಏಮ್ಸ್(AIIMS) ಸ್ಥಾಪನೆ ಆಗಬೇಕೆಂದು ನಡೆಸಲಾಗುತ್ತಿರುವ ಹೋರಾಟ 636 ದಿನಗಳಿಗೆ ತಲುಪಿದೆ. ಇಂದು ಸಚಿವರಾದ ಎನ್‌.ಎಸ್‌ ಭೋಸರಾಜು ಅವರೊಂದಿಗೆ ಕೇಂದ್ರ ಆರೋಗ್ಯ ಸಚಿವರನ್ನು ಭೇಟಿಯಾಗಿ ಮತ್ತೊಮ್ಮೆ ಮನವಿ ಸಲ್ಲಿಸಿದ್ದೇವೆ. ರಾಯಚೂರು ಜಿಲ್ಲೆಗೆ ಏಮ್ಸ್(AIIMS) ಮಂಜೂರು ಮಾಡುವುದರಿಂದ ಆಗುವಂತಹ ಅನುಕೂಲತೆಗಳ ಬಗ್ಗೆ, ಜನರ ಜೀವನ ಮಟ್ಟದಲ್ಲಿ ಆಗುವಂತಹ ಬದಲಾವಣೆಗಳ ಬಗ್ಗೆ ವಿವರವಾಗಿ ಸಚಿವರಿಗೆ ತಿಳಿಸಲಾಗಿದೆ. ಈ ಬಾರಿಯ ಸಂಸತ್ ಅಧಿವೇಶನದ ಒಳಗಾಗಿಯೇ ಘೋಷಣೆ ಮಾಡುವಂತೆಯೂ ಒತ್ತಾಯಿಸಲಾಗಿದೆ ಎಂದು ಹೇಳಿದರು.

Previous Post
ಕರ್ನಾಟಕದ ಜಿಎಸ್ ಟಿ ಯಲ್ಲಿ ಒಂದೇ ಒಂದು ಪೈಸೆಯೂ ಬಾಕಿ ಉಳಿಸಿಕೊಂಡಿಲ್ಲ – ನಿರ್ಮಲ ಸೀತರಾಮನ್
Next Post
ನಾಳೆ ವಿಧಾನಸೌಧದ ಮೆಟ್ಟಿಲುಗಳ ಬಳಿ ನಡೆಯಲಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ರಾಜ್ಯ ಮಟ್ಟದ ಎರಡನೇ ಜನತಾ ದರ್ಶನ ಕಾರ್ಯಕ್ರಮಕ್ಕೆ ಸಕಲ ಸಿದ್ದತೆಗಳು ನಡೆದಿದೆ.

Recent News