‘ಸಾವಿರಾರು ಕುಟುಂಬಗಳ ಸಂತೋಷವೇ ನನ್ನ ದೊಡ್ಡ ಸಂಪತ್ತು’ ಹೀಗೆನ್ನುತ್ತಾ ಭಾವುಕರಾದ ಪ್ರಧಾನಿ ಮೋದಿ

‘ಸಾವಿರಾರು ಕುಟುಂಬಗಳ ಸಂತೋಷವೇ ನನ್ನ ದೊಡ್ಡ ಸಂಪತ್ತು’ ಹೀಗೆನ್ನುತ್ತಾ ಭಾವುಕರಾದ ಪ್ರಧಾನಿ ಮೋದಿ

ಸೊಲ್ಲಾಪುರ ಜನವರಿ 19: ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ) ಅಡಿಯಲ್ಲಿ ನಿರ್ಮಿಸಲಾದ ಮನೆಗಳನ್ನು ಫಲಾನುಭವಿಗಳಿಗೆ ಶುಕ್ರವಾರ ಹಸ್ತಾಂತರಿಸಿದ ನಂತರ, ಸೋಲಾಪುರದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡುವಾಗ ಪ್ರಧಾನಿ ನರೇಂದ್ರ ಮೋದಿ ಭಾವುಕರಾದರು. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಪ್ರಧಾನಿ ಭಾರತದ ಅತಿ ದೊಡ್ಡ ಹೌಸಿಂಗ್ ಸೊಸೈಟಿಯನ್ನು ಉದ್ಘಾಟಿಸಿದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಮಹಾರಾಷ್ಟ್ರದ ಸೋಲಾಪುರದಲ್ಲಿ ಆರ್ಥಿಕವಾಗಿ ದುರ್ಬಲ ವರ್ಗದ ಸುಮಾರು 15,024 ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿದರು. ಈ ಫಲಾನುಭವಿಗಳಲ್ಲಿ ಕೈಮಗ್ಗ ಕಾರ್ಮಿಕರು, ಮಾರಾಟಗಾರರು, ಪವರ್ ಲೂಮ್ ಕಾರ್ಮಿಕರು, ಚಿಂದಿ ಆಯುವವರು, ಬೀಡಿ ಕಾರ್ಮಿಕರು, ಚಾಲಕರು ಸೇರಿದಂತೆ ಇತರರು ಸೇರಿದ್ದಾರೆ.

ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸಾವಿರಾರು ಕುಟುಂಬಗಳ ಸಂತೋಷವೇ ನನ್ನ ದೊಡ್ಡ ಸಂಪತ್ತು ಎಂದು ಭಾವುಕರಾದರು. ‘ನಾನು ಈ ಸ್ಥಳಕ್ಕೆ ಭೇಟಿ ನೀಡಿದ್ದೇನೆ. ನನ್ನ ಬಾಲ್ಯದಲ್ಲಿ ನನಗೂ ಇಂತಹ ಮನೆಯಲ್ಲಿ ವಾಸಿಸುವ ಅವಕಾಶ ಸಿಕ್ಕಿದ್ದರೆ ಎಂದು ನಾನು ಅಂದುಕೊಳ್ಳುತ್ತಿದ್ದೆ’ ಎನ್ನುವಾಗ ಮೋದಿ ಅವರ ಕಣ್ಣು ತುಂಬಿ ಬಂತು. ಜೊತೆಗೆ ಫಲಾನುಭವಿಗಳನ್ನುದ್ದೇಶಿಸಿ ಭಾವುಕರಾಗಿ ಈ ರೀತಿಯ ಅಭಿವೃದ್ಧಿ ಯೋಜನೆಗಳನ್ನು ನೋಡಿದಾಗ ತುಂಬಾ ಖುಷಿಯಾಗುತ್ತದೆ ಎಂದರು. ಸೊಲ್ಲಾಪುರದ ಸಾವಿರಾರು ಬಡವರು, ಕೂಲಿಕಾರ್ಮಿಕರಿಗಾಗಿ ನಾವು ತೆಗೆದುಕೊಂಡಿದ್ದ ವಾಗ್ದಾನ ಇಂದು ನೆರವೇರುತ್ತಿರುವುದು ಸಂತಸ ತಂದಿದೆ. ಈ ಯೋಜನೆಗೆ ಶಂಕುಸ್ಥಾಪನೆ ಮಾಡಲು ನಾನು ಇಲ್ಲಿಗೆ ಬಂದ ದಿನವೇ ನಾನು ಶೀಘ್ರದಲ್ಲೇ ಬರುತ್ತೇನೆ ಎಂದು ಭರವಸೆ ನೀಡಿದ್ದೆ. ಇಂದು ನಿಮ್ಮ ಮನೆಗಳ ಕೀಲಿಗಳನ್ನು ನೀಡಿದ್ದೇನೆ. ”ಇಂದು ಮೋದಿ ಈ ಗ್ಯಾರಂಟಿಯನ್ನು ಈಡೇರಿಸಿದ್ದಾರೆ. ನೆನಪಿಡಿ, ಮೋದಿ ಗ್ಯಾರಂಟಿ ಎಂದರೆ ‘ಗ್ಯಾರಂಟಿಯನ್ನು ಪೂರ್ಣಗೊಳಿಸುವ ಗ್ಯಾರಂಟಿ’!” ಎಂದು ಅವರು ಹೇಳಿದರು.

ಇದೇ ವೇಳೆ ಪಿಎಂ ಮೋದಿ ಅವರು ಜನವರಿ 22 ರಂದು ತಮ್ಮ ಮನೆಗಳನ್ನು ರಾಮ ಜ್ಯೋತಿಯಿಂದ ಬೆಳಗಿಸುವಂತೆ ಜನರನ್ನು ಒತ್ತಾಯಿಸಿದರು. “ಜನವರಿ 22 ರಂದು ಜನರು ಬೆಳಗಿಸುವ ರಾಮ ಜ್ಯೋತಿ ಅವರ ಜೀವನದಿಂದ ಬಡತನವನ್ನು ತೊಡೆದುಹಾಕಲು ಸ್ಫೂರ್ತಿಯಾಗಲಿದೆ” ಎಂದು ಅವರು ಹೇಳಿದರು. ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿ ಬಡವರ ಕಲ್ಯಾಣ ಮತ್ತು ಸ್ವಾವಲಂಬನೆಯ ಪ್ರಾಮುಖ್ಯತೆಗೆ ಸರ್ಕಾರ ಬದ್ಧತೆಯನ್ನು ಪುನರುಚ್ಚರಿಸಿದರು. ಇದೇ ವೇಳೆ ಅವರು ಕಾರ್ಮಿಕರ ಘನತೆಗೆ ಒತ್ತು ನೀಡಿದರು. ಬಡವರು ಎದುರಿಸುತ್ತಿರುವ ತೊಂದರೆಗಳನ್ನು ನಿವಾರಿಸಲು ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಸರ್ಕಾರದ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ ಎಂದರು.

”2014ರಲ್ಲಿ ಸರಕಾರ ರಚನೆಯಾದ ತಕ್ಷಣ ನನ್ನ ಸರಕಾರ ಬಡವರಿಗಾಗಿಯೇ ಮೀಸಲಾದ ಸರಕಾರ ಎಂದು ಹೇಳಿದ್ದೆ. ಆದ್ದರಿಂದ, ನಾವು ಅಂತಹ ಯೋಜನೆಗಳನ್ನು ಒಂದರ ನಂತರ ಒಂದರಂತೆ ಜಾರಿಗೆ ತಂದಿದ್ದೇವೆ, ಇದು ಬಡವರ ಕಷ್ಟಗಳನ್ನು ಕಡಿಮೆ ಮಾಡುತ್ತದೆ ಮತ್ತು ಅವರ ಜೀವನವನ್ನು ಸುಲಭಗೊಳಿಸುತ್ತದೆ, “ಎಂದು ಪ್ರಧಾನಿ ಮೋದಿ ಹೇಳಿದರು.

Previous Post
ಸಚಿವ ಶರಣಪ್ರಕಾಶ್ ಪಾಟೀಲ್ ಅಧ್ಯಕ್ಷತೆಯಲ್ಲಿ ಉದ್ಯೋಗ ಮೇಳ ಸಮಿತಿ ರಚನೆ ಉದ್ಯಮಿಗಳ ಜೊತೆ ಚರ್ಚಿಸಿ ಉದ್ಯೋಗ ಸೃಷ್ಟಿಸಲಿರುವ ಸಮಿತಿ
Next Post
ಅನ್ನಪೂರ್ಣಿ ವಿವಾದ, ಹಿಂದುಗಳಲ್ಲಿ ನಟಿ ನಯನತಾರಾ ಕ್ಷಮೆಯಾಚನೆ

Recent News