ಲೋಕಸಭೆ ಚುನಾವಣೆ ಕಲುಬುರಗಿಯಿಂದ ಸ್ಪರ್ಧಿಸ್ತಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ?

ಲೋಕಸಭೆ ಚುನಾವಣೆ ಕಲುಬುರಗಿಯಿಂದ ಸ್ಪರ್ಧಿಸ್ತಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ?

ನವದೆಹಲಿ: ದೇಶದಲ್ಲಿ ಲೋಕಸಭೆ ಚುನಾವಣೆ ರಂಗೇರುತ್ತಿದೆ. ಕಳೆದ ವಿಧಾನಸಭೆ ಸೋಲಿನಿಂದ ಕಂಗೆಟ್ಟಿರುವ ಕಮಲ ಪಡೆ ಲೋಕಸಭೆಗೆ ಭರ್ಜರಿ ತಾಲೀಮು ನಡೆಸುತ್ತಿದೆ. ಶತಾಯಗತಾಯ ರಾಜ್ಯದಲ್ಲಿ 28ಕ್ಕೆ 28 ಕ್ಷೇತ್ರ ಗೆಲ್ಲಲು ಸಜ್ಜಾಗಿರುವ ಕೇಸರಿಪಡೆ ಮೊದಲ ಹಂತವಾಗಿ ಖರ್ಗೆ ಕೋಟೆಯನ್ನು ಮತ್ತೊಮ್ಮೆ ಭೇದಿಸಲು ಮಾಸ್ಟರ್ ಪ್ಲಾನ್ ರೂಪಿಸಿದೆ.

ಕಲ್ಯಾಣ ಕರ್ನಾಟಕದ ಹೆಬ್ಬಾಗಿಲಾಗಿರುವ ಕಲಬುರಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರೂರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಖರ್ಗೆ ತವರೂರಲ್ಲಿ ಕಾಂಗ್ರೆಸ್ ಭರ್ಜರಿ ಜಯಗಳಿಸಿತ್ತು. ಕಲಬುರಗಿ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳ ಪೈಕಿ 7 ರಲ್ಲಿ ಕಾಂಗ್ರೆಸ್ ಗೆದ್ದು ಬೀಗಿತ್ತು. ವಿಧಾನಸಭೆ ಚುನಾವಣೆ ಮುಗಿದು ಒಂದು ವರ್ಷ ಕಳೆಯುವಷ್ಟರಲ್ಲೇ ಲೋಕಸಭೆ ಚುನಾವಣೆ ಬಂದಿದೆ. ಕಾಂಗ್ರೆಸ್ ಅದೇ ಗೆಲುವಿನ ಗುಂಗಿನಲ್ಲಿದೆ. ಎಐಸಿಸಿ ಅಧ್ಯಕ್ಷ ಮತ್ತು INDIA ಒಕ್ಕೂಟದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ಬಾರಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿಯುತ್ತಾರಾ ಇಲ್ಲವೋ ಎನ್ನುವುದು ಇನ್ನೂ ಪಕ್ಕಾ ಆಗಿಲ್ಲ.

ಕಲ್ಯಾಣ ಕರ್ನಾಟಕ ಭಾಗದ ಕಾಂಗ್ರೆಸ್ ನಾಯಕರು ಈ ಬಾರಿಯೂ ಖರ್ಗೆಯುವರನ್ನು ಮತ್ತೊಮ್ಮೆ ಕಲಬುರಗಿಯಿಂದ ಅಖಾಡಕ್ಕೆ ಇಳಿಯಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ. ಸದ್ಯ ರಾಜ್ಯಸಭಾ ಸದಸ್ಯರಾಗಿರುವ ಖರ್ಗೆ ಒಂದು ವೇಳೆ ಲೋಕಸಭಾ ಅಖಾಡಕ್ಕೆ ಇಳಿಯೋದು ಪಕ್ಕಾ ಆದರೆ ಕಲಬುರಗಿಯಿಂದ ಇಳಿಯುತ್ತಾರಾ ಅಥವಾ ಬೇರೆ ಯಾವುದಾದರೂ ಲೋಕಸಭಾ ಕ್ಷೇತ್ರದಿಂದ ಅಖಾಡಕ್ಕೆ ಇಳಿಯುತ್ತಾರಾ ಎನ್ನುವುದು ಕೂಡ ಬಹಳ ಸಸ್ಪೆನ್ಸ್.

ಒಂದು ವೇಳೆ ಖರ್ಗೆ ಅವರು ಈ ಬಾರಿ ಅಖಾಡಕ್ಕೆ ಇಳಿಯದೇ ಇದ್ದರೆ ಖರ್ಗೆ ಅವರ ಅಳಿಯ ರಾಧಾಕೃಷ್ಣ ಅವರನ್ನು ಅಖಾಡಕ್ಕೆ ಇಳಿಸುವ ಲೆಕ್ಕಾಚಾರ ಇದೆ ಎಂಬ ಮಾತು ಕಾಂಗ್ರೆಸ್‌ ವಲಯದಿಂದ ಕೇಳಿ ಬಂದಿದೆ. ರಾಧಾಕೃಷ್ಣ ಅವರು ಚುನಾವಣೆ ನಿಲ್ಲಲು ಹಿಂದೇಟು ಹಾಕಿದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಿಂಚೋಳಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಕೆಲವೇ ಮತಗಳ ಅಂತರದಿಂದ ಸೋತ ಬಂಜಾರ ಸಮುದಾಯದ ಅಭ್ಯರ್ಥಿ ಸುಭಾಷ್ ರಾಠೋಡ್ ಅವರನ್ನು ಅಖಾಡಕ್ಕೆ ಇಳಿಸಲು ಪ್ಲ್ಯಾನ್ ನಡೆದಿದೆ.

ವಿಧಾನಸಭೆ, ಲೋಕಸಭೆ ಸೇರಿ 11 ಚುನಾವಣೆಯಲ್ಲಿ ಗೆದ್ದು ಸೋಲಿಲ್ಲದ ಸರದಾರ ಎಂದೇ ಗೆದ್ದು ಬೀಗುತ್ತಿದ್ದ ಮಲ್ಲಿಕಾರ್ಜುನ ಖರ್ಗೆಯನ್ನು ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದ ಉಮೇಶ್ ಜಾಧವ್ ಸೋಲಿಸುವ ಮೂಲಕ ಇಡಿ ದೇಶದ ಗಮನ ಸೆಳೆದಿದ್ದರು. ಈ ಬಾರಿಯೂ ಬಿಜೆಪಿಯಿಂದ ಉಮೇಶ್ ಜಾಧವ್ ಬಹುತೇಕ ಅಭ್ಯರ್ಥಿಯಾಗುತ್ತಾರೆ ಎಂಬ ಮಾತು ಕೇಳಿ ಬಂದಿದೆ. ಈ ಮಧ್ಯೆ ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ್ ಮತ್ತಿಮೂಡ್ ಪತ್ನಿ ಜಯಶ್ರೀ ಮತ್ತಿಮೂಡ್ ಬಿಜೆಪಿಯ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಹಾಗಾಗಿ ಬಿಜೆಪಿಯ ಟಿಕೆಟ್ ಯಾರ ಪಾಲಾಗಲಿದೆ ಎನ್ನುವುದೇ ಸದ್ಯದ ಕುತೂಹಲ.

Previous Post
ಎಸ್ಪಿಯಿಂದ ಎರಡನೇ ಪಟ್ಟಿ ಬಿಡುಗಡೆ, ಗ್ಯಾಂಗಸ್ಟರ್‌ ಸಹೋದರನಿಗೆ ಟಿಕೇಟ್
Next Post
ಅಮೇಥಿಯಲ್ಲಿ ಚುನಾವಣೆಗೂ ಮುನ್ನ ಮುಖಾಮುಖಿಯಾದ ರಾಹುಲ್ ಗಾಂಧಿ ಮತ್ತು ಸ್ಮೃತಿ ಇರಾನಿ!

Recent News