ಗಣಿಯೊಳಗೆ ಲಿಫ್ಟ್ ಕುಸಿತ 14 ಮಂದಿಯ ರಕ್ಷಣೆ, ಓರ್ವ ಸಾವು
ನವದೆಹಲಿ : ನಿನ್ನೆ ರಾತ್ರಿಯಿಂದ ನೀಮ್ ಕಾ ಥಾಣಾ ಜಿಲ್ಲೆಯ ಗಣಿಯೊಂದರಲ್ಲಿ ಲಿಪ್ಟ್ ಕುಸಿತಗೊಂಡು ಗಣಿಯೊಳಗೆ ಸಿಲುಕಿಕೊಂಡಿದ್ದ ಹಿಂದೂಸ್ತಾನ್ ಕಾಪರ್ ಲಿಮಿಟೆಡ್ ನ 15 ಮಂದಿ ಅಧಿಕಾರಿಗಳ ಪೈಕಿ 14 ಮಂದಿಯನ್ನು ರಕ್ಷಿಸಲಾಗಿದ್ದು, ಓರ್ವ ಅಧಿಕಾರಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ನೀಮ್ ಕಾ ಥಾಣಾದ ಜಿಲ್ಲಾಧಿಕಾರಿ ಶರದ್ ಮೆಹ್ರಾ, ರಕ್ಷಿಸಲಾಗಿರುವ 14 ಮಂದಿಯನ್ನು ಚಿಕಿತ್ಸೆಗಾಗಿ ಜೈಪುರದಲ್ಲಿನ ಎಸ್ಎಂಎಸ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ತಿಳಿಸಿದರು.
ಸಿಬ್ಬಂದಿಗಳನ್ನು ಕರೆದೊಯ್ಯುತ್ತಿದ್ದ ಲಿಫ್ಟ್ ನ ಹಗ್ಗವು ತುಂಡರಿಸಿ, ಲಿಫ್ಟ್ ಕುಸಿತಗೊಂಡಿದೆ, ಮಂಗಳವಾರ ರಾತ್ರಿಯಿಂದ ಸಾರ್ವಜನಿಕ ಉದ್ಯಮದ 15 ಮಂದಿ ಸಿಬ್ಬಂದಿಗಳು ಗಣಿಯೊಳಗೆ ಸಿಲುಕಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ವಿಚಕ್ಷಣಾ ವಿಭಾಗದ ಸದಸ್ಯರು ಹಾಗೂ ಇತರ ಅಧಿಕಾರಿಗಳನ್ನು ಒಳಗೊಂಡ ತಂಡವು ಪರಿಶೀಲನೆಗೆಂದು ಗಣಿಗೆ ಇಳಿದಿತ್ತು. ಅವರು ಮೇಲೆ ಬರುವಾಗ ಲಿಫ್ಟ್ ನ ಹಗ್ಗ ತುಂಡರಿಸಿದ್ದರಿಂದ ಲಿಫ್ಟ್ ಕುಸಿದಿದೆ.
ಜುಂಜುನುವಿನ ಖೇತ್ರಿಯಲ್ಲಿರುವ ಹಿಂದೂಸ್ತಾನ್ ಕಾಪರ್ ಲಿಮಿಟೆಡ್ನ ಕೋಲಿಹಾನ್ ಗಣಿಯಲ್ಲಿ ಲಿಫ್ಟ್ ಹಗ್ಗ ತುಂಡಾಗಿ ಅವಘಡ ಸಂಭವಿಸಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸಲು ಮತ್ತು ಅಗತ್ಯವಿರುವ ಎಲ್ಲ ನೆರವನ್ನೂ ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಂತ್ರಸ್ತರಿಗೆ ಸಹಾಯ ಮತ್ತು ಆರೋಗ್ಯ ಸೌಲಭ್ಯಗಳನ್ನು ನೀಡಲಾಗುತ್ತದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಭಜನ್ಲಾಲ್ ಶರ್ಮಾ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ