ವಯನಾಡು ದುರಂತ ಮಾನವ ನಿರ್ಮಿತ: ಮಾಧವ್ ಗಾಡ್ಗೀಳ್

ವಯನಾಡು ದುರಂತ ಮಾನವ ನಿರ್ಮಿತ: ಮಾಧವ್ ಗಾಡ್ಗೀಳ್

ತಿರುವನಂತಪುರ, ಜು. 31: ಕೇರಳದ ವಯನಾಡಿನಲ್ಲಿ ಸಂಭವಿಸಿದ ಪ್ರಾಕೃತಿಕ ದುರಂತವನ್ನು ಪರಿಸರತಜ್ಞ ಮಾಧವ್ ಗಾಡ್ಗೀಳ್ ಅವರು ಮಾನವ ನಿರ್ಮಿತ ಎಂದು ಕರೆದಿದ್ದಾರೆ. 2018ರಲ್ಲಿ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಪ್ರವಾಹ, ಭೂಕುಸಿತಗಳು ಹಾಗೂ ಇತ್ತೀಚೆಗಷ್ಟೇ ಉತ್ತರ ಕನ್ನಡದ ಶಿರೂರಿನಲ್ಲಿ ಸಂಭವಿಸಿದ ಗುಡ್ಡ ಕುಸಿತ, ನಿನ್ನೆ ಕೇರಳದ ವಯನಾಡಿನಲ್ಲಿ ಆದ ಗುಡ್ಡ ಕುಸಿತ, ಭೂಕುಸಿತ ಪರಿಸರ ತಜ್ಞರನ್ನು ಮತ್ತೆ ಚರ್ಚೆಗೀಡು ಮಾಡಿದೆ. ಈ ದುರಂತವನ್ನು ಮಾನವ ನಿರ್ಮಿತ ಎಂದಿರುವ ಮಾಧವ್ ಪರಿಸರಕ್ಕೆ ಸಂಬಂಧಿಸಿದ ಶಿಫಾರಸುಗಳನ್ನು ಜಾರಿಗೊಳಿಸಲು ಕೇರಳ ಸರ್ಕಾರ ವಿಫಲವಾಗಿದೆ ಎಂದು ಹೇಳಿದ್ದಾರೆ. ‘ದಿ ಹಿಂದೂ’ಜತೆ ಮಾತನಾಡಿರುವ ಅವರು, ಹವಾಮಾನ ವೈಪರೀತ್ಯದ ನಡುವೆ ಇಂತಹ ವಿಪತ್ತುಗಳನ್ನು ತಡೆಗಟ್ಟಲು ವಿನ್ಯಾಸಗೊಳಿಸಿದ ಸಮಿತಿಯ ಮಾರ್ಗಸೂಚಿಗಳನ್ನು ರಾಜ್ಯ ಸರ್ಕಾರ ಪಾಲಿಸುತ್ತಿಲ್ಲ.
ಪರಿಸರ ಸೂಕ್ಷ್ಮ ವಲಯಗಳು – I ಮತ್ತು ಪರಿಸರ ಸೂಕ್ಷ್ಮ ವಲಯಗಳು – II ಪ್ರದೇಶಗಳಲ್ಲಿ ನಿರ್ಮಾಣ ಚಟುವಟಿಕೆಗಳ ಮೇಲೆ ಸ್ಪಷ್ಟವಾದ ನಿರ್ಬಂಧಗಳು ಮತ್ತು ನಿಬಂಧನೆಗಳು ಇದ್ದವು. ಮಂಗಳವಾರ ವಯನಾಡಿನ ಬೇರೆ ಬೇರೆ ಕಡೆಗಳಲ್ಲಿ ಸಂಭವಿಸಿದ ಭೂಕುಸಿತಕ್ಕೆ ಇದುವರೆಗೆ 150ಕ್ಕೂ ಹೆಚ್ಚು ಜೀವಗಳು ಬಲಿಯಾಗಿವೆ. 13 ವರ್ಷಗಳ ಹಳೆಯ ವರದಿ ವಯನಾಡಿನ ಪ್ರಾಕೃತಿಕ ದುರಂತದ ನಂತರ 13 ವರ್ಷಗಳ ಹಳೆಯ ವರದಿ ಮುನ್ನಲೆಗೆ ಬಂದು ಹತ್ತು ಹಲವು ಚರ್ಚೆಗಳನ್ನು ಹುಟ್ಟುಹಾಕಿದೆ. ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ (ESAs) ವಿವೇಚನಾರಹಿತ ಕಲ್ಲುಗಣಿಗಾರಿಕೆ ಮತ್ತು ನಿರ್ಮಾಣ ಚಟುವಟಿಕೆಗಳನ್ನು ನಿಲ್ಲಿಸಬೇಕೆಂದು 13 ವರ್ಷಗಳ ಹಿಂದೆಯೇ ಮಾಧವ್ ಗಾಡ್ಗೀಳ್ ನೇತೃತ್ವದ ಪಶ್ಚಿಮ ಘಟ್ಟಗಳ ಪರಿಸರ ತಜ್ಞರ ಸಮಿತಿಯು ಆಗಸ್ಟ್ 2011 ರಲ್ಲಿ ಕೇಂದ್ರಕ್ಕೆ ವರದಿ ಸಲ್ಲಿಸಿತ್ತು.
ಅಭಿವೃದ್ಧಿರಹಿತ ವಲಯ ಈ ಅತ್ಯಂತ ಸೂಕ್ಷ್ಮ ಪ್ರದೇಶಗಳಲ್ಲಿ ಯಾವುದೇ ಅಭಿವೃದ್ಧಿ ನಡೆಯಬಾರದು, ಈ ಪ್ರದೇಶಗಳನ್ನು ಬ್ರಿಟಿಷರ ಅವಧಿಯಲ್ಲಿ ಚಹಾ ತೊಟಗಳಿಗೆ ಬಳಸಲಾಗುತ್ತಿತ್ತು ನಂತರ ರೆಸಾರ್ಟ್​ಗಳು, ಕೃತಕ ಸರೋವರಗಳ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿಯನ್ನು ಕಂಡಿದೆ. ಕ್ವಾರಿಗಳು ಕಾರ್ಯನಿರ್ವಹಿಸುತ್ತಿವೆ ದುರಂತ ಸಂಭವಿಸಿದ ಸ್ಥಳದಿಂದ ಕೆಲವು ಕಿಲೋಮೀಟರ್ ದೂರದಲ್ಲಿ ಕ್ವಾರಿಗಳು ಕಾರ್ಯನಿರ್ವಹಿಸುತ್ತಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸಿದೆ ಎಂದು ಗಾಡ್ಗೀಳ್ ಹೇಳಿದ್ದಾರೆ. ಈ ಕ್ವಾರಿಗಳು ಈಗ ನಿಷ್ಕ್ರಿಯವಾಗಿದ್ದರೂ ಅವುಗಳ ಕಾರ್ಯಾಚರಣೆಯ ಅವಧಿಯಲ್ಲಿ ಉಂಟಾದ ಆಘಾತದ ಅಲೆಗಳು ವಿಪತ್ತು ಪೀಡಿತ ಪ್ರದೇಶಗಳಿಗೆ ವಿಸ್ತರಿಸಿರಬಹುದು, ಭಾರಿ ಮಳೆಯ ಸಂದರ್ಭದಲ್ಲಿ ಭೂಕುಸಿತಕ್ಕೆ ಪ್ರಚೋದನೆ ನೀಡಬಹುದು ಎಂದು ಗಾಡ್ಗೀಳ್ ಅಭಿಪ್ರಾಯಪಟ್ಟಿದ್ದಾರೆ.
ಸಮಿತಿಯ ವರದಿಯನ್ನು ಸರ್ಕಾರ ತಿರಸ್ಕರಿಸಿದೆ ಇದು ವಯನಾಡು ಹಾಗೂ ರಾಜ್ಯದ ಇತರೆ ಭಾಗಗಳಲ್ಲಿ ಪುನರಾವರ್ತಿತ ಅನಾಹುತಗಳಿಗೆ ಕಾರಣವಾಗಿದೆ. ಇತ್ತೀಚೆಗೆ ಉದ್ಯಮಿಯೊಬ್ಬರು ಈ ಪ್ರದೇಶಗಳನ್ನು ಪ್ರವಾಸಿ ತಾಣವಾಗಿ ಪರಿವರ್ತಿಸುವ ಕುರಿತು ಪ್ರಸ್ತಾಪ ಇಟ್ಟಿದ್ದರು. ಪ್ರವಾಸೋದ್ಯಮ ನೆಪದಲ್ಲಿ ಕಟ್ಟಡಗಳು ಹಾಗೂ ಮೂಲಸೌಕರ್ಯ ಅಭಿವೃದ್ಧಿಗಳನ್ನು ಕೈಗೊಳ್ಳಲಾಗುತ್ತಿದೆ ಇದು ಪರಿಸರ ವ್ಯವಸ್ಥೆ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ಹೇಳಿದರು. ವರದಿಯ ಶಿಫಾರದುಗಳನ್ನು ಗಂಭೀರವಾಗಿ ಪರಿಗಣಿಸಿ ಜಾರಿಗೊಳಿಸದಿದ್ದರೆ ಇಂತಹ ಹಲವು ಅನಾಹುತಗಳಿಗೆ ಎಡೆಮಾಡಿಕೊಡಬಹುದು ಎಂದು ಗಾಡ್ಗೀಳ್ ಎಚ್ಚರಿಸಿದ್ದಾರೆ.

Previous Post
ಯುಪಿಎಸ್​ಸಿ ಅಧ್ಯಕ್ಷೆಯಾಗಿ ಪ್ರೀತಿ ಸೂದನ್ ನೇಮಕ
Next Post
ಇಸ್ಮಾಯಿಲ್ ಹನಿಯೆಹ್ ಹತ್ಯೆ; ಇಸ್ರೇಲ್ ದೂಷಿಸಿದ ಐಆರ್‌ಜಿಸಿ

Recent News