ಇಂದಿನಿಂದ ಲೋಕಸಭೆ ಮುಂಗಾರು ಅಧಿವೇಶನ

ಇಂದಿನಿಂದ ಲೋಕಸಭೆ ಮುಂಗಾರು ಅಧಿವೇಶನ

ನವದೆಹಲಿ : ಇಂದಿನಿಂದ ಲೋಕಸಭೆ ಮುಂಗಾರು ಅಧಿವೇಶನ ಆರಂಭವಾಗಲಿದ್ದು, ಅಗಸ್ಟ್ 12 ವರೆಗೂ ಅಧಿವೇಶನ ನಡೆಯಲಿದೆ. ನಾಳೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೂರನೇ ಅವಧಿಯ ಮೊದಲನೇಯ ಬಜೆಟ್ ಮಂಡನೆಯಾಗಲಿದ್ದು ಹಣಕಾಸು ಸಚಿವೆ ನಿರ್ಮಲ ಸೀತರಾಮನ್ ಬಜೆಟ್ ಮಂಡಿಸಲಿದ್ದಾರೆ.

ಈ ಬಾರಿಯ ಮುಂಗಾರು ಅಧಿವೇಶನದಲ್ಲಿ ವಿಪತ್ತು ನಿರ್ವಹಣಾ ಕಾನೂನನ್ನು ತಿದ್ದುಪಡಿ ಮಾಡುವುದು ಸೇರಿದಂತೆ 6 ಹೊಸ ಮಸೂದೆಗಳನ್ನು ಕೇಂದ್ರ ಸರ್ಕಾರವು ಪರಿಚಯಿಸಲಿದೆ. ಲೋಕಸಭೆಯ ಸೆಕ್ರೆಟರಿಯೇಟ್ ಮಾಹಿತಿ ಪ್ರಕಾರ ಹಣಕಾಸು ಮಸೂದೆ, ವಿಪತ್ತು ನಿರ್ವಹಣಾ ಮಸೂದೆ, ಬಾಯ್ಲರ್​ಗಳ ಮಸೂದೆ, ಭಾರತೀಯ ವಾಯುಯಾನ ವಿಧೇಯಕ ಮಸೂದೆ, ಕಾಫಿ (ಪ್ರಚಾರ ಮತ್ತು ಅಭಿವೃದ್ಧಿ) ಮಸೂದೆ, ರಬ್ಬರ್ (ಪ್ರಚಾರ ಮತ್ತು ಅಭಿವೃದ್ಧಿ) ಮಸೂದೆ ಮಂಡನೆಯಾಗಲಿದೆ‌.

ನೀಟ್ ಪರೀಕ್ಷೆ ಅಕ್ರಮ, ಕನ್ವರ್ ಯಾತ್ರೆ, ಮಣಿಪುರ ಸಂಘರ್ಷ, ರೈಲ್ವೆ ಸುರಕ್ಷತೆ ಸೇರಿ ಹಲವು ವಿಚಾರಗಳೊಂದಿಗೆ ಆಡಳಿತ ಪಕ್ಷವನ್ನು ಕಟ್ಟಿ ಹಾಕಲು ಕಾಂಗ್ರೇಸ್ ನೇತೃತ್ವದ ವಿರೋಧ ಪಕ್ಷಗಳ ಒಕ್ಕೂಟ ಇಂಡಿಯಾ ಸನ್ನದ್ಧವಾಗಿದೆ. ಇದಕ್ಕಾಗಿ ತಯಾರಿ ನಡೆಸಿದ್ದು ಅಧಿವೇಶನಕ್ಕೂ ಮುನ್ನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ನೇತೃತ್ವದಲ್ಲಿ ಸಭೆ ನಡೆಯಲಿದೆ ಎನ್ನಲಾಗಿದೆ.

ಮುಂಗಾರು ಅಧಿವೇಶನ ಹಿನ್ನಲೆ ಭಾನುವಾರ ಸರ್ಕಾರ ಸರ್ವಪಕ್ಷ ಸಭೆ ಕರೆದಿತ್ತು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬಿಜೆಪಿಯಿಂದ ಜೆಪಿ ನಡ್ಡಾ ಮತ್ತು ಕಿರಣ್ ರಿಜಿಜು ಉಪಸ್ಥಿತರಿದ್ದರು. ಕಾಂಗ್ರೆಸ್‌ನಿಂದ ಗೌರವ್ ಗೊಗೊಯ್, ಜೈರಾಮ್ ರಮೇಶ್, ಕೆ ಸುರೇಶ್ ಉಪಸ್ಥಿತರಿದ್ದರು. ಸಭೆಯಲ್ಲಿ ಎಲ್‌ಜೆಪಿ ನಾಯಕ ಚಿರಾಗ್ ಪಾಸ್ವಾನ್, ಸಮಾಜವಾದಿ ಪಕ್ಷದ ರಾಮ್ ಗೋಪಾಲ್ ಯಾದವ್, ಆಮ್ ಆದ್ಮಿ ಪಕ್ಷದ ಸಂಜಯ್ ಸಿಂಗ್, ಎಐಎಂಐಎಂನ ಅಸಾದುದ್ದೀನ್ ಓವೈಸಿ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಪ್ರಫುಲ್ ಪಟೇಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸಭೆಯಲ್ಲಿ ಸಮಾಜವಾದಿ ಪಕ್ಷ ಮತ್ತು ಎಎಪಿಯು ಕನ್ವರ್ ಯಾತ್ರೆಯ ಮಾರ್ಗದಲ್ಲಿರುವ ತಿನಿಸುಗಳಿಗೆ ಮಾಲೀಕರ ಹೆಸರನ್ನು ಪ್ರದರ್ಶಿಸಲು ಉತ್ತರ ಪ್ರದೇಶ ಸರ್ಕಾರದ ವಿವಾದಾತ್ಮಕ ನಿರ್ದೇಶನದ ವಿಷಯವನ್ನು ಪ್ರಸ್ತಾಪಿಸಿದೆ ಎಂದು ಮೂಲಗಳು ತಿಳಿಸಿವೆ. ಕಾಂಗ್ರೆಸ್‌ನ ಗೌರವ್ ಗೊಗೊಯ್ ಅವರು ಲೋಕಸಭೆಯ ಉಪಸಭಾಪತಿ ಸ್ಥಾನವನ್ನು ಪ್ರತಿಪಕ್ಷಕ್ಕಾಗಿ ಕೋರಿದರು, ಆ ಸ್ಥಾನ ಖಾಲಿಯಾಗಬಾರದು ಎಂದು ಹೇಳಿದ್ದಾರೆ.

ಸಭೆಯಲ್ಲಿ ವಿಶೇಷ ಸ್ಥಾನಮಾನದ ಬೇಡಿಕೆಯೂ ವ್ಯಕ್ತವಾಯಿತು. ಬಿಜೆಪಿಯ ಮಿತ್ರಪಕ್ಷಗಳಾದ ಜನತಾ ದಳ (ಯುನೈಟೆಡ್) ಮತ್ತು ಎಲ್‌ಜೆಪಿ (ರಾಮ್ ವಿಲಾಸ್) ಮತ್ತು ರಾಷ್ಟ್ರೀಯ ಜನತಾ ದಳ ಬಿಹಾರದ ಬೇಡಿಕೆಯನ್ನು ಎತ್ತಿದವು. ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್‌ಸಿಪಿ ಕೂಡ ಆಂಧ್ರಪ್ರದೇಶಕ್ಕೆ ವಿಶೇಷ ವರ್ಗದ ಸ್ಥಾನಮಾನಕ್ಕೆ ಒತ್ತಾಯಿಸಿದೆ.

Previous Post
ಮ್ಯಾಥ್ಸ್ ಒಲಿಂಪಿಯಾಡ್‌ನಲ್ಲಿ ಭಾರತದ ಸಾಧನೆ ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆ
Next Post
ನಾನು ರಾಜ್ಯಕ್ಕೆ ಬರುವುದು ರಾಜ್ಯ ಸರಕಾರಕ್ಕೆ ಸಹಿಸಲಾಗುತ್ತಿಲ್ಲ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕಿಡಿ

Recent News