ಬಿಜೆಪಿ ಸೇರ್ಪಡೆಯಾದ ಅರವಿಂದರ್ ಸಿಂಗ್ ಲವ್ಲಿ
ನವದೆಹಲಿ : ಆಪ್ ಜೊತೆಗಿನ ಮೈತ್ರಿ ಖಂಡಿಸಿ ಕಾಂಗ್ರೇಸ್ ದೆಹಲಿ ರಾಜ್ಯಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಅರವಿಂದರ್ ಸಿಂಗ್ ಲವ್ಲಿ ಶನಿವಾರ ಔಪಚಾರಿಕವಾಗಿ ಬಿಜೆಪಿ ಸೇರಿದ್ದಾರೆ. ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ, ದೆಹಲಿ ಬಿಜೆಪಿ ಮುಖ್ಯಸ್ಥ ವೀರೇಂದ್ರ ಸಚ್ದೇವ ಮತ್ತು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಅವರ ಸಮ್ಮುಖದಲ್ಲಿ ಲವ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಅರವಿಂದ್ ಸಿಂಗ್ ಲವ್ಲಿ ಜೊತೆಗೆ ಮಾಜಿ ಕಾಂಗ್ರೆಸ್ ಶಾಸಕರಾದ ರಾಜ್ ಕುಮಾರ್ ಚೌಹಾಣ್, ನಸೀಬ್ ಸಿಂಗ್, ನೀರಜ್ ಬಸೋಯಾ ಮತ್ತು ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅಮಿತ್ ಮಲಿಕ್ ಕೂಡ ಬಿಜೆಪಿ ಪಕ್ಷದ ಪ್ರಧಾನ ಕಚೇರಿಯಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.
ಬಿಜೆಪಿ ಸೇರ್ಪಡೆ ಬಳಿಕ ಮಾತನಾಡಿದ ಅರವಿಂದರ್ ಸಿಂಗ್ ಲವ್ಲಿ, ಬಿಜೆಪಿಯ ಬ್ಯಾನರ್ ಅಡಿಯಲ್ಲಿ, ಪ್ರಧಾನಿ ಮೋದಿ ನೇತೃತ್ವದಲ್ಲಿ ದೆಹಲಿಯ ಜನರಿಗಾಗಿ ಹೋರಾಡಲು ನಮಗೆ ಅವಕಾಶವನ್ನು ನೀಡಲಾಗಿದೆ ಇದರಲ್ಲಿ ನನಗೆ ಸಂಪೂರ್ಣ ಭರವಸೆ ಇದೆ, ಯಾವುದೇ ಸಂದೇಹವಿಲ್ಲ. ದೇಶದಲ್ಲಿ ಬಿಜೆಪಿ ಸರ್ಕಾರ ಪ್ರಚಂಡ ಬಹುಮತದೊಂದಿಗೆ ರಚನೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ದೆಹಲಿಯಲ್ಲೂ ಬಿಜೆಪಿ ಬಾವುಟ ಹಾರಲಿದೆ ಎಂದರು.
ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಮಾತನಾಡಿ, ನಿಮ್ಮ ಸೇವೆಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುವುದು ಎಂದು ನಾನು ನಿಮಗೆ ಭರವಸೆ ನೀಡಲು ಬಯಸುತ್ತೇನೆ. ನಮ್ಮ ಪಕ್ಷಕ್ಕೆ ನಿಮ್ಮಂತಹ ಜನರು ಬೇಕು. ನೀವು ನಮ್ಮ ಕುಟುಂಬಕ್ಕೆ ಸೇರುತ್ತಿದ್ದೀರಿ ಮತ್ತು ನಾನು ನಿಮ್ಮನ್ನು ಸ್ವಾಗತಿಸಲು ಬಯಸುತ್ತೇನೆ ಮತ್ತು ನಿಮ್ಮನ್ನು ಅಭಿನಂದಿಸುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದರು.
ಇದಕ್ಕೂ ಮೊದಲು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದ ಈ ನಾಯಕರು, ದೆಹಲಿಯಲ್ಲಿ ಕಾಂಗ್ರೇಸ್ ಭ್ರಷ್ಟಚಾರದಲ್ಲಿ ಮುಳುಗಿರುವ ಆಮ್ ಅದ್ಮಿ ಜೊತೆಗೆ ಮೈತ್ರಿ ಮಾಡಿಕೊಂಡಿರುವುದು ತಪ್ಪು. ಆಪ್ ಪ್ರಮುಝ ನಾಯಕರು ಈಗಾಗಲೇ ಜೈಲಿನಲ್ಲಿದ್ದಾರೆ. ಈ ಮೈತ್ರಿಯಿಂದ ನಾವು ದಿನ ಬೆಳಗಾದರೆ ಮುಜುಗರಕ್ಕೆ ಒಳಪಡುವಂತಾಗಿದೆ. ಮೈತ್ರಿ ನಡುವೆ ಸ್ಥಳೀಯ ನಾಯಕರನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದ್ದರು.