ಮಣಿಪುರ ಹಿಂಸಾಚಾರಕ್ಕೆ ಬಲಿಯಾದವರ ಬಗ್ಗೆ ಸ್ವಲ್ಪವೂ ಸಹಾನುಭೂತಿ ಇಲ್ಲದ ಮೋದಿ: ಮಲ್ಲಿಕಾರ್ಜುನ ಖರ್ಗೆ

ಮಣಿಪುರ ಹಿಂಸಾಚಾರಕ್ಕೆ ಬಲಿಯಾದವರ ಬಗ್ಗೆ ಸ್ವಲ್ಪವೂ ಸಹಾನುಭೂತಿ ಇಲ್ಲದ ಮೋದಿ: ಮಲ್ಲಿಕಾರ್ಜುನ ಖರ್ಗೆ

ನವದೆಹಲಿ, ಮೇ 4: ಮಣಿಪುರದ ಪರಿಸ್ಥಿತಿಯ ಬಗ್ಗೆ ಮೋದಿ ಸರಕಾರ ನಿರಾಸಕ್ತಿಯನ್ನು ಹೊಂದಿದ್ದು, ಪಶ್ಚಾತ್ತಾಪವಿಲ್ಲದಂತೆ ವರ್ತಿಸುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿಯನ್ನು ನಡೆಸಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪೋಸ್ಟ್‌ ಮಾಡಿದ್ದು, ಮಣಿಪುರವು ನಿಖರವಾಗಿ ಒಂದು ವರ್ಷದ ಹಿಂದೆ ಅಂದರೆ ಮೇ 3, 2023ರಂದು ಒತ್ತಿ ಉರಿಯಲು ಪ್ರಾರಂಭಿಸಿತು. ಮಣಿಪುರದಲ್ಲಿ ಮಾನವೀಯತೆ ನಾಶವಾಯಿತು, ಉದಾಸೀನ ಮೋದಿ ಸರ್ಕಾರ ಮತ್ತು ಅಸಮರ್ಥ ಬಿಜೆಪಿಯ ರಾಜ್ಯ ಸರ್ಕಾರದ ಕ್ರೂರ ಸಂಯೋಜನೆಯು ರಾಜ್ಯವನ್ನು ವಾಸ್ತವಿಕವಾಗಿ ಎರಡು ಭಾಗಗಳಾಗಿ ವಿಂಗಡಿಸಿದೆ ಎಂದು ಹೇಳಿದ್ದಾರೆ.

ಪಶ್ಚಾತ್ತಾಪವಿಲ್ಲದ ಪ್ರಧಾನಿ ಮೋದಿ ಈ ಗಡಿ ರಾಜ್ಯಕ್ಕೆ ಕಾಲಿಟ್ಟಿಲ್ಲ, ಇದು ಅವರ ಅಸಮರ್ಥತೆ ಮತ್ತು ಸಂಪೂರ್ಣ ಅಸಡ್ಡೆಯನ್ನು ಬಹಿರಂಗಪಡಿಸುತ್ತದೆ. ಅವರ ಅಹಂಕಾರವು ಸುಂದರವಾದ ರಾಜ್ಯದ ಸಾಮಾಜಿಕ ರಚನೆಯನ್ನು ಹಾಳುಮಾಡಿದೆ. ತಮ್ಮ ಜೀವನವನ್ನು ಬಿಜೆಪಿ ಹೇಗೆ ಶೋಚನೀಯಗೊಳಿಸಿದೆ ಎಂದು ಮಣಿಪುರದ ಎಲ್ಲಾ ಸಮುದಾಯದ ಜನರಿಗೆ ಈ ಗೊತ್ತಾಗಿದೆ ಎಂದು ಖರ್ಗೆ ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಈಶಾನ್ಯದ ಜನರೇ, ಅಭಿವೃದ್ಧಿ ಎಂದು ಕರೆಯಲ್ಪಡುವ ಮೋದಿ ಸರ್ಕಾರದ ನಾಚಿಕೆಗೇಡಿನ ಮಾತುಗಳು ಈ ಪ್ರದೇಶದಲ್ಲಿ ಮಾನವೀಯತೆಯ ಧ್ವನಿಯನ್ನು ಮುಳುಗಿಸಿದೆ. ಪ್ರಧಾನಿ ಮೋದಿ ಮತ್ತು ಅವರ ಸರ್ಕಾರವು ಮಣಿಪುರದಲ್ಲಿ ಹಿಂಸಾಚಾರಕ್ಕೆ ಬಲಿಯಾದವರ ಬಗ್ಗೆ ಯಾವುದೇ ಸಹಾನುಭೂತಿ ಹೊಂದಿಲ್ಲ ಎಂದು ಭಾರತೀಯರಿಗೆ ಈಗ ತಿಳಿದಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಮಣಿಪುರದಲ್ಲಿ 220ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ, 60,000 ಜನರು ಸ್ಥಳಾಂತರಗೊಂಡಿದ್ದಾರೆ ಮತ್ತು ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸಾವಿರಾರು ಜನರು ಇನ್ನೂ ಶಿಬಿರಗಳಲ್ಲಿ ಕೊಳೆಯುತ್ತಿದ್ದಾರೆ. ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ, ಮೆರವಣಿಗೆ ಮತ್ತು ಭಯಾನಕ ಹಿಂಸಾಚಾರ ನಡೆಯಿತು, ಆದರೆ ಪ್ರಧಾನಿ ಮೌನವಾಗಿದ್ದರು. ಆಕ್ರೋಶದ ನಂತರವೇ 2023ರ ಆಗಸ್ಟ್‌ನಲ್ಲಿ ಪ್ರಧಾನಮಂತ್ರಿಯವರು ತುಟಿ ಬಿಚ್ಚಿದ್ದಾರೆ, ಅದು ಈಗ ಟೊಳ್ಳಾಗಿದೆ ಎಂದು ಹೇಳಿದ್ದಾರೆ.
ನಮ್ಮ ಭದ್ರತಾ ಸಿಬ್ಬಂದಿ ಹುತಾತ್ಮರಾಗುತ್ತಿದ್ದಾರೆ. ಎರಡು ಸಮುದಾಯಗಳ ಪೊಲೀಸ್ ಟ್ರೈನಿಗಳು ಪರಸ್ಪರ ಗುಂಡು ಹಾರಿಸಿಕೊಂಡಿದ್ದಾರೆ ಮತ್ತು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಲೂಟಿ ಮಾಡಲಾಗಿದೆ. ಜನವರಿಯಲ್ಲಿ ಕಂಗ್ಲಾ ಕೋಟೆಯಲ್ಲಿ ಕಾಂಗ್ರೆಸ್‌ ಮಣಿಪುರ ಘಟಕದ ಅಧ್ಯಕ್ಷರ ಮೇಲೆ ಕ್ರೂರವಾಗಿ ಹಲ್ಲೆ ಮತ್ತು ಚಿತ್ರಹಿಂಸೆ ನೀಡಲಾಯ್ತು, ಮಣಿಪುರದಲ್ಲಿ ಯಾವುದೇ ರೀತಿಯ ಆಡಳಿತ ವ್ಯವಸ್ಥೆ ಜೀವಂತವಾಗಿಲ್ಲ, ಅಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಯಿಂದಾಗಿ ಮಣಿಪುರದಲ್ಲಿ ಸಹಜತೆ ಮತ್ತು ಶಾಂತಿಗೆ ಭಂಗ ಉಂಟಾಗುತ್ತದೆ ಎಂದು ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದು, ಈಶಾನ್ಯ ರಾಜ್ಯದ ಪರಿಸ್ಥಿತಿಯ ಬಗ್ಗೆ ಮೋದಿ ಸರ್ಕಾರ ಮತ್ತು ಪ್ರಧಾನಿಯ ಮೌನವನ್ನು ಪ್ರಶ್ನಿಸಿದ್ದಾರೆ.

Previous Post
ಉತ್ತರಕನ್ನಡ ಜಿಲ್ಲೆಯ ಜನ ರಾಜಕೀಯವಾಗಿ ಪ್ರಜ್ಞಾವಂತರು: ನುಡಿದಂತೆ ನಡೆಯುವವರನ್ನು ಗುರುತಿಸುವ ಪ್ರಜ್ಞಾವಂತಿಕೆ ಇವರಿಗಿದೆ: ಸಿ.ಎಂ.ಸಿದ್ದರಾಮಯ್ಯ ಮೆಚ್ಚುಗೆ
Next Post
ಅಮಿತ್‌ ಶಾ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲು

Recent News