ರೋಹಿತ್‌ ವೇಮುಲಾ ಪ್ರಕರಣ ಮರುತನಿಖೆ ಒತ್ತಾಯಿಸಿ ತೆಲಂಗಾಣ ಸಿಎಂ ಭೇಟಿ ಮಾಡಿದ ರಾಧಿಕಾ ವೇಮುಲಾ

ರೋಹಿತ್‌ ವೇಮುಲಾ ಪ್ರಕರಣ ಮರುತನಿಖೆ ಒತ್ತಾಯಿಸಿ ತೆಲಂಗಾಣ ಸಿಎಂ ಭೇಟಿ ಮಾಡಿದ ರಾಧಿಕಾ ವೇಮುಲಾ

ಹೈದರಾಬಾದ್, ಮೇ 4: ಹೈದರಾಬಾದ್ ವಿಶ್ವವಿದ್ಯಾಲಯದ ಪಿಎಚ್‌ಡಿ ವಿದ್ಯಾರ್ಥಿ ರೋಹಿತ್ ವೇಮುಲಾ ಸಾವಿನ ಪ್ರಕರಣದಲ್ಲಿ ತೆಲಂಗಾಣ ಪೊಲೀಸರು ಪ್ರಕರಣದ ಮುಕ್ತಾಯದ ವರದಿಯನ್ನು ಕೋರ್ಟ್‌ಗೆ ಸಲ್ಲಿಸಿದ್ದರು, ಇದೀಗ ಪ್ರಕರಣದ ಮರು ತನಿಖೆ ನಡೆಸುವಂತೆ ರೋಹಿತ್ ವೇಮುಲಾ ತಾಯಿ ರಾಧಿಕಾ ವೇಮುಲಾ ತೆಲಂಗಾಣ ಸಿಎಂ ರೇವಂತ್‌ ರೆಡ್ಡಿಯನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಿದ್ದು, ಈ ವೇಳೆ ಪ್ರಕರಣದ ಮರು ತನಿಖೆ ನಡೆಸುವುದಾಗಿ ಸಿಎಂ ಭರವಸೆ ನೀಡಿದ್ದಾರೆ.
2016ರ ಜನವರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಹೈದರಾಬಾದ್ ವಿಶ್ವವಿದ್ಯಾಲಯದ ಪಿಎಚ್‌ಡಿ ವಿದ್ಯಾರ್ಥಿ ರೋಹಿತ್ ವೇಮುಲಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಪೊಲೀಸರು ಮುಕ್ತಾಯದ (ಫೈಲ್ ಕ್ಲೋಸ್) ವರದಿಯನ್ನು ಸಲ್ಲಿಸಿದ್ದು, ಆಗಿನ ಸಿಕಂದರಾಬಾದ್ ಸಂಸದ ಬಂಡಾರು ದತ್ತಾತ್ರೇಯ, ವಿಧಾನ ಪರಿಷತ್ ಸದಸ್ಯ ಎನ್ ರಾಮಚಂದರ್ ರಾವ್ ಮತ್ತು ಉಪಕುಲಪತಿ ಅಪ್ಪಾ ರಾವ್, ಎಬಿವಿಪಿ ಮುಖಂಡರು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರಿಗೆ ಕ್ಲೀನ್‌ ಚಿಟ್‌ ನೀಡಿದ್ದರು.

ತೆಲಂಗಾಣ ಹೈಕೋರ್ಟ್‌ಗೆ ಈ ಕುರಿತು ವರದಿ ಸಲ್ಲಿಕೆಯಾಗಿದ್ದು, ವರದಿಯು ರೋಹಿತ್ ‘ಪರಿಶಿಷ್ಟ ಜಾತಿಗೆ ಸೇರಿದವನಲ್ಲ’ ಎಂದು ಹೇಳಿದೆ ಮತ್ತು ತನ್ನ “ನಿಜವಾದ ಜಾತಿಯ ಗುರುತು” ಪತ್ತೆಯಾಗುತ್ತದೆ ಎಂದು ಹೆದರಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಊಹಿಸಲಾಗಿದೆ ಎಂದು ಹೇಳಲಾಗಿದೆ. ಆತನ ಕುಟುಂಬದ ಜಾತಿ ಪ್ರಮಾಣಪತ್ರಗಳನ್ನು ಯಾವುದೇ ಸಾಕ್ಷ್ಯವನ್ನು ನೀಡದೆ ನಕಲಿ ಮಾಡಲಾಗಿದೆ ಎಂದು ವರದಿಯಲ್ಲಿ ಆರೋಪಿಸಲಾಗಿದೆ. ಇದರ ಬೆನ್ನಲ್ಲಿ ತೆಲಂಗಾಣದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ), ರವಿ ಗುಪ್ತಾ ಅವರು ಪ್ರತಿಕ್ರಿಯಿಸಿದ್ದು, ಪ್ರಕರಣದ ವರದಿಯಲ್ಲಿ ವ್ಯತ್ಯಾಸ ಕಂಡು ಬಂದಿದೆ. ಈ ಹಿನ್ನೆಲೆ ನ್ಯಾಯಾಲಯದ ಮಧ್ಯಪ್ರವೇಶವನ್ನು ಕೋರುತ್ತಿದ್ದೇವೆ, ಈ ಕುರಿತು ಹೆಚ್ಚಿನ ತನಿಖೆಗೆ ಅನುಮತಿ ನೀಡುವಂತೆ ಮ್ಯಾಜಿಸ್ಟ್ರೇಟ್‌ಗೆ ಮನವಿ ಮಾಡುವುದಾಗಿ ಹೇಳಿದ್ದಾರೆ.

ವರದಿಯಲ್ಲಿ ಕೆಲವು ಅನುಮಾನಗಳಿವೆ. ಪ್ರಕರಣದ ಬಗ್ಗೆ ಪರಿಶೀಲಿಸಲು ನಾವು ನ್ಯಾಯಾಲಯವನ್ನು ಕೋರುತ್ತೇವೆ ಎಂದು ಹೇಳಿದರು. ಮೃತ ರೋಹಿತ್ ವೇಮುಲನ ತಾಯಿ ಹಾಗೂ ಇತರರಿಂದ ಕೆಲವು ಅನುಮಾನಗಳು ವ್ಯಕ್ತವಾಗಿರುವುದರಿಂದ ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಲು ನಿರ್ಧರಿಸಲಾಗಿದ್ದು, ಪ್ರಕರಣದ ಮುಂದಿನ ತನಿಖೆಗೆ ಅನುಮತಿ ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ. ಪ್ರಕರಣದ ತನಿಖಾಧಿಕಾರಿ ಮಾದಾಪುರದ ಸಹಾಯಕ ಪೊಲೀಸ್ ಆಯುಕ್ತರಾಗಿದ್ದು, ಕಳೆದ ನವೆಂಬರ್ 2023ರ ಮೊದಲು ಪ್ರಕರಣದ ಅಂತಿಮ ಮುಕ್ತಾಯ ವರದಿಯನ್ನು ಅವರು ನಡೆಸಿದ್ದ ತನಿಖೆಯ ಆಧಾರದ ಮೇಲೆ ಸಿದ್ಧಪಡಿಸಿದ್ದಾರೆ ಎಂದು ಡಿಜಿಪಿ ಹೇಳಿದ್ದಾರೆ.

Previous Post
ಅಮಿತ್‌ ಶಾ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲು
Next Post
ಪ್ರಜ್ವಲ್ ರೇವಣ್ಣ ಪ್ರಕರಣ: ಸಂತ್ರಸ್ತರ ನೆರವಿಗೆ ನಿಲ್ಲುವಂತೆ ಸಿಎಂಗೆ ರಾಹುಲ್ ಗಾಂಧಿ ಪತ್ರ

Recent News