ಶಿವಸೇನೆ ನಾಯಕರನ್ನು ಕರೆತರಬೇಕಿದ್ದ ಕಾಪ್ಟರ್ ಪತನ

ಶಿವಸೇನೆ ನಾಯಕರನ್ನು ಕರೆತರಬೇಕಿದ್ದ ಕಾಪ್ಟರ್ ಪತನ

ಮುಂಬೈ, ಮೇ 3: ಶಿವಸೇನೆ ನಾಯಕರನ್ನು ಕರೆತರಲು ಹೊರಟಿದ್ದ ಹೆಲಿಕಾಪ್ಟರ್ ಪತನಗೊಂಡಿರುವ ಘಟನೆ ಮಹಾರಾಷ್ಟ್ರದ ರಾಯಗಢದಲ್ಲಿ ಶುಕ್ರವಾರ ನಡೆದಿದೆ. ಹೆಲಿಕಾಪ್ಟರ್‌ ಲ್ಯಾಂಡಿಂಗ್‌ ವೇಳೆ ವಾಲಿದ ಪರಿಣಾಮ ಇಬ್ಬರು ಪೈಲಟ್‌ಗಳು ಗಾಯಗೊಂಡಿದ್ದಾರೆ.

ಘಟನೆ ಸಂಭವಿಸಿದಾಗ ಚಾಪರ್ ಶಿವಸೇನೆಯ ಶಿಂಧೆ ಬಣದ (ಯುಬಿಟಿ) ನಾಯಕಿ ಸುಷ್ಮಾ ಅಂಧಾರೆಯನ್ನು ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ಸಾರ್ವಜನಿಕ ರ್ಯಾಲಿಗಾಗಿ ಕರೆದೊಯ್ಯಲು ಹೋಗುತ್ತಿತ್ತು. ಶುಕ್ರವಾರ ಬೆಳಗ್ಗೆ 9.30ರ ಸುಮಾರಿಗೆ ಹೆಲಿಕಾಪ್ಟರ್‌ನ ಪೈಲಟ್‌ಗಳು ಅದನ್ನು ಮಹುಹಾದ್‌ನಲ್ಲಿರುವ ತಾತ್ಕಾಲಿಕ ಹೆಲಿಪ್ಯಾಡ್‌ನಲ್ಲಿ ಇಳಿಸಲು ಪ್ರಯತ್ನಿಸಿದಾಗ ಈ ದುರ್ಘಟನೆ ಸಂಭವಿಸಿದೆ. ಹೆಲಿಕಾಪ್ಟರ್ ವಾಲಿದ್ದು, ಪೈಲಟ್‌ಗಳಿಗೆ ಗಾಯಗಳಾಗಿವೆ.

ಲ್ಯಾಂಡಿಂಗ್ ಸಮಯದಲ್ಲಿ ಹೆಲಿಕಾಪ್ಟರ್ ತನ್ನ ನಿಯಂತ್ರಣವನ್ನು ಕಳೆದುಕೊಂಡಿತ್ತು, ಹೆಲಿಪ್ಯಾಡ್ನಲ್ಲಿ ಧೂಳೆಬ್ಬಿಸುತ್ತಿತ್ತು, ದೊಡ್ಡದಾಗಿ ಶಬ್ದ ಮಾಡುತ್ತಾ ಸಮತೋಲನವನ್ನು ಕಳೆದುಕೊಂಡಿತ್ತು. ಘಟನೆಯಲ್ಲಿ ಹೆಲಿಕಾಪ್ಟರ್‌ನ ರೋಟರ್ ಬ್ಲೇಡ್‌ಗಳಿಗೂ ಹಾನಿಯಾಗಿದೆ. ಘಟನೆಯ ನಂತರ, ಪೊಲೀಸರು ಮತ್ತು ತುರ್ತು ತಂಡದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಪೈಲಟ್‌ಗಳನ್ನು ರಕ್ಷಿಸಿದರು ಮತ್ತು ಅವರಿಗೆ ಪ್ರಥಮ ಚಿಕಿತ್ಸೆ ನೀಡಿದರು. ಮೈದಾನವು ಸಮತಟ್ಟಾಗಿರದ ಕಾರಣ ಘಟನೆ ಸಂಭವಿಸಿದೆ ಎನ್ನಲಾಗಿದೆ. ರಾಯಗಢ ಲೋಕಸಭಾ ಕ್ಷೇತ್ರಕ್ಕೆ ಮೇ 7 ರಂದು ಮೂರನೇ ಹಂತದಲ್ಲಿ ಮತದಾನ ನಡೆಯಲಿದೆ.

Previous Post
ರಾಯ್ಬರೇಲಿಯಲ್ಲಿ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ
Next Post
ಬ್ರಿಜ್ ಭೂಷಣ್ ಪುತ್ರನಿಗೆ ಬಿಜೆಪಿ ಟಿಕೆಟ್‌: ನಿರಾಶೆ ವ್ಯಕ್ತಪಡಿಸಿದ ಕುಸ್ತಿಪಟುಗಳು

Recent News