ನಿತ್ಯ ವೈದ್ಯರ ಸಲಹೆ ಪಡೆಯಲು ಅವಕಾಶ ಕೋರಿ ಸಲ್ಲಿಸಿದ್ದ ಅರ್ಜಿ ವಜಾ ಜೈಲಿನಲ್ಲಿ ವೈದ್ಯರ ಸಲಹೆ ಪಡೆಯಲು ಕೇಜ್ರಿವಾಲ್ ಗೆ ಸೂಚನೆ
ನವದೆಹಲಿ : ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚುತ್ತಿರುವ ಹಿನ್ನಲೆ ನಿತ್ಯ ಪತ್ನಿಯ ಉಪಸ್ಥಿತಿಯಲ್ಲಿ ವಿಡಿಯೋ ಕಾನ್ಫರೇನ್ಸ್ ಮೂಲಕ 15 ನಿಮಿಷಗಳ ಮೂಲಕ ವೈದ್ಯರ ಸಲಹೆ ಪಡೆಯಲು ಅವಕಾಶ ನೀಡುವಂತೆ ಕೋರಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಜಾ ಮಾಡಿದೆ.
ಜೈಲಿನಲ್ಲಿ ಕೇಜ್ರಿವಾಲ್ಗೆ ಅಗತ್ಯವಿರುವ ಎಲ್ಲಾ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸುವುದನ್ನು ಜೈಲು ಅಧಿಕಾರಿಗಳು ಜವಬ್ದಾರಿ, ಇದನ್ನು ಅವರು ಖಚಿತಪಡಿಸಿಕೊಳ್ಳಬೇಕು ಎಂದು ರೂಸ್ ಅವೆನ್ಯೂ ನ್ಯಾಯಾಲಯಗಳ ವಿಶೇಷ ನ್ಯಾಯಾಧೀಶ ಕಾವೇರಿ ಬವೇಜಾ ಹೇಳಿದ್ದಾರೆ.
ಕೇಜ್ರಿವಾಲ್ ಅವರ ಸಕ್ಕರೆ ಮಟ್ಟವನ್ನು ಹೆಚ್ಚಿಸಲು ಜೈಲಿನಲ್ಲಿ ಉದ್ದೇಶಪೂರ್ವಕವಾಗಿ ಮಾವಿನಹಣ್ಣು, ಸಿಹಿತಿಂಡಿಗಳು ಮತ್ತು ಚಹಾವನ್ನು ಸೇವಿಸುತ್ತಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ಇಡಿ) ಆರೋಪಿಸಿತ್ತು. ಜಾಮೀನಿಗೆ ಅವಕಾಶ ಕಲ್ಪಿಸಲು ಮುಖ್ಯಮಂತ್ರಿ ಹೀಗೆ ಮಾಡುತ್ತಿದ್ದಾರೆ ಎಂದು ಕೇಂದ್ರ ತನಿಖಾ ಸಂಸ್ಥೆ ಹೇಳಿಕೊಂಡಿತ್ತು. ಆದಾಗ್ಯೂ, ಒಟ್ಟು 48 ಊಟಗಳಲ್ಲಿ ಕೇವಲ ಮೂರು ಬಾರಿ ಮನೆಯಲ್ಲಿ ಬೇಯಿಸಿದ ಆಹಾರದಲ್ಲಿ ಮಾವಿನಹಣ್ಣುಗಳನ್ನು ನ್ಯಾಯಾಂಗ ಬಂಧನದಲ್ಲಿ ಅವರಿಗೆ ಕಳುಹಿಸಲಾಗಿದೆ ಎಂದು ಕೇಜ್ರಿವಾಲ್ ಪರ ವಕೀಲರು ಹೇಳಿದ್ದರು.
ಅರ್ಜಿದಾರರ ಕುಟುಂಬವು ವೈದ್ಯಕೀಯವಾಗಿ ಸೂಚಿಸಿದ ಆಹಾರದ ವಿರುದ್ಧ ಅಂದರೆ ಮಾವು, ಸಿಹಿತಿಂಡಿಗಳು, ಆಲೂ ಪುರಿ ಇತ್ಯಾದಿಗಳ ವಿರುದ್ಧ ವಿವಿಧ ಸಹಿ ತಿನಿಸು ಏಕೆ ಕಳುಹಿಸುತ್ತಿದೆ ಎಂಬುದನ್ನು ಈ ನ್ಯಾಯಾಲಯವು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ, ವೈದ್ಯರ ಸಲಹೆಯ ಆಹಾರಕ್ಕೂ, ಮನೆಯ ಆಹಾರಕ್ಕೂ ಸಾಕಷ್ಟು ವ್ಯತಾಸವಿದೆ ಎಂದು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
ಇಡಿ ಮತ್ತು ಜೈಲು ಅಧಿಕಾರಿಗಳ ಪ್ರತಿಕ್ರಿಯಲ್ಲಿ ಅರವಿಂದ್ ಕೇಜ್ರಿವಾಲ್ ಅವರಿಗೆ ಇನ್ಸುಲಿನ್ ನೀಡುವಂತೆ ಎಂದಿಗೂ ವೈದ್ಯರು ಸಲಹೆ ನೀಡಿಲ್ಲ ಎಂದು ತಿಳಿದುಬಂದಿದೆ. ತಿಹಾರ್ ಜೈಲು ಅಧಿಕಾರಿಗಳ ಪ್ರಕಾರ ನಿತ್ಯವೂ ಜೈಲಿನಲ್ಲಿ ವೈದ್ಯರು ರಕ್ತದ ತಪಾಸಣೆ ಮಾಡುತ್ತಿದ್ದಾರೆ. ಅರ್ಜಿದಾರರನ್ನು ಇತರ ಕೈದಿಗಳಿಗಿಂತ ಭಿನ್ನವಾಗಿ ಪರಿಗಣಿಸಲಾಗುವುದಿಲ್ಲ, ಅರ್ಜಿದಾರರಿಗೆ ಅಗತ್ಯವಾದ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು ಜೈಲು ಅಧಿಕಾರಿಗಳಿಗೆ ಸಾಧ್ಯವಾಗದಿದ್ದರೆ ಮಾತ್ರ ಖಾಸಗಿ ಚಿಕಿತ್ಸೆಗಾಗಿ ವಿನಂತಿಯನ್ನು ಅನುಮತಿಸಬಹುದು ಎಂದು ನ್ಯಾಯಾಲಯ ಹೇಳಿದೆ.
ಕೇಜ್ರಿವಾಲ್ ಅವರಿಗೆ ಜೈಲಿನಲ್ಲಿ ವಿಶೇಷ ಸಮಾಲೋಚನೆ ಅಗತ್ಯವಿದ್ದರೆ, ತಿಹಾರ್ ಜೈಲು ಅಧಿಕಾರಿಗಳು ಏಮ್ಸ್ ನಿರ್ದೇಶಕರು ರಚಿಸುವ ವೈದ್ಯಕೀಯ ಮಂಡಳಿಯನ್ನು ಸಂಪರ್ಕಿಸಬಹುದು, ರಚನೆಯಾದ ವೈದ್ಯಕೀಯ ಮಂಡಳಿಯು ಕೇಜ್ರಿವಾಲ್ಗೆ ಇನ್ಸುಲಿನ್ ನೀಡುವ ಬಗ್ಗೆ ನಿರ್ಧರಿಸುತ್ತದೆ. ವೈದ್ಯಕೀಯ ಮಂಡಳಿಯು ಕೇಜ್ರಿವಾಲ್ಗೆ ಆಹಾರ ಮತ್ತು ವ್ಯಾಯಾಮದ ಬಗ್ಗೆ ಸೂಚಿಸಲಿದೆ. ವೈದ್ಯಕೀಯ ಮಂಡಳಿಯು ಸೂಚಿಸಿದ ಆಹಾರ ಪದ್ಧತಿಯಂತೆ ಕೇಜ್ರಿವಾಲ್ ಅವರಿಗೆ ಮನೆಯಲ್ಲಿ ಬೇಯಿಸಿದ ಆಹಾರವನ್ನು ಸೇವಿಸಲು ಅನುಮತಿ ನೀಡಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.